More

    ಆಸ್ತಿಗಾಗಿ ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಮೈದುನ ! ಹಾನಗಲ್ಲ ತಾಲೂಕು ಯಳ್ಳೂರು ಗ್ರಾಮದ ತ್ರಿವಳಿ ಕೊಲೆ

    ಹಾನಗಲ್ಲ: ಆಸ್ತಿ ವಿಚಾರಕ್ಕೆ ಆಕ್ರೋಶಗೊಂಡು ಅಣ್ಣನ ಹೆಂಡತಿ (ಅತ್ತಿಗೆ) ಹಾಗೂ ಅಣ್ಣನ ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಪ್ರಕರಣ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.
    ಗೀತಾ ಹೊನ್ನಗೌಡ ಮರಿಗೌಡ್ರ (32), ಅಕುಲಗೌಡ (10) ಹಾಗೂ ಅಂಕಿತಾ (6) ಹತ್ಯೆಯಾದವರು. ಕುಮಾರ ಚನ್ನಬಸನಗೌಡ ಮರಿಗೌಡ್ರ (35) ಕೊಲೆಗೈದ ಆರೋಪಿ.
    ಶನಿವಾರ ನಸುಕಿನ ಜಾವ 2.30ರ ಸುಮಾರು ಕುಮಾರ ಕಂದ್ಲಿಯಿಂದ ಗೀತಾ, ಅಕುಲಗೌಡ ಹಾಗೂ ಅಂಕಿತಾಳ ತಲೆಗೆ ಮನಬಂದಂತೆ ಹೊಡೆದು ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾನೆ. ಇದರಿಂದ ಅಕುಲಗೌಡ ಸ್ಥಳದಲ್ಲೇ ಮೃತಪಟ್ಟಿದ್ದು, ಗೀತಾ ಹಾಗೂ ಅಂಕಿತಾ ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಎಸ್‌ಪಿ ಶಿವಕುಮಾರ ಗುಣಾರೆ ಹಾಗೂ ಹಾನಗಲ್ಲ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
    ಬಾಡಿಗೆ ವಿಚಾರಕ್ಕೆ ಕೊಲೆ
    ಕುಮಾರನ ಸಹೋದರ ಹೊನ್ನಗೌಡ್ರ ಕಳೆದ 15 ವರ್ಷಗಳಿಂದ ದುಬೈನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ಗೀತಾರನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳು ಜನಿಸಿದ ನಂತರ ಆರು ವರ್ಷಗಳಿಂದ ಗೀತಾ ಪತಿಯ ಊರು ಯಳ್ಳೂರಿನಲ್ಲಿ ವಾಸವಾಗಿದ್ದರು. ಕುಮಾರ ಹಾಗೂ ಆತನ ತಾಯಿ ಕೂಡ ಅದೇ ಮನೆಯಲ್ಲಿ ವಾಸವಾಗಿದ್ದರು.
    ಹೊನ್ನಗೌಡ್ರ ಹಾನಗಲ್ಲ ಶಹರದ ಕುಂಟನಹೊಸಳ್ಳಿ ರಸ್ತೆಯಲ್ಲಿ ಮರಿಗೌಡ್ರ ಕಾಂಪ್ಲೆಕ್ಸ್ ಹಾಗೂ ಬಾಡಿಗೆ ಮನೆಗಳನ್ನು ಹೊಂದಿದ್ದಾರೆ. ಬಾಡಿಗೆ ಹಣವನ್ನು ಕುಮಾರನೇ ವಸೂಲಿ ಮಾಡುತ್ತಿದ್ದ. 20 ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ ಹೊನ್ನಗೌಡ್ರಗೆ ಕುಮಾರ ಕುಡಿತದ ಚಟಕ್ಕೆ ದಾಸನಾಗಿದ್ದು ಗೊತ್ತಾಗಿತ್ತು. ಹಾಗಾಗಿ, ಬಾಡಿಗೆ ಹಣವನ್ನು ತನ್ನ ಹೆಂಡತಿ ಗೀತಾಳ ಕೈಯಲ್ಲಿ ಕೊಡುವಂತೆ ಬಾಡಿಗೆದಾರರಿಗೆ ತಿಳಿಸಿ ನ.1ರಂದು ದುಬೈಗೆ ವಾಪಸಾಗಿದ್ದ. ಇದರಿಂದ ಆಕ್ರೋಶಿತನಾಗಿದ್ದ ಕುಮಾರ ಮಲಗಿದ್ದ ಮೂವರನ್ನೂ ಬರ್ಬರವಾಗಿ ಕೊಲೆಗೈದಿದ್ದಾನೆ. ನಂತರ ಬಚ್ಚಲಿನಲ್ಲಿ ಕಂದ್ಲಿ ತೊಳೆದಿದ್ದಾನೆ. ತಾನು ಧರಿಸಿದ್ದ ಬಟ್ಟೆ ಬಿಚ್ಚಿ ತೊಳೆದ ರೀತಿಯಲ್ಲಿ ಇಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts