ಹರಿಹರ: ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಚಿಕ್ಕಪುಷ್ಯ ಮಳೆಗೆ ಇಲ್ಲಿನ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.
ರಾಘವೇಂದ್ರ ಮಠದ ಹಿಂಭಾಗ ಕಾಮಗಾರಿ ಪ್ರಗತಿಯಲ್ಲಿರುವ ತುಂಗಭದ್ರಾ ಆರತಿ ಮಂಟಪದ ಬಳಿ ನಗರದ ನೂರಾರು ಸಾರ್ವಜನಿಕರು ಭಾನುವಾರ ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಆಗಮಿಸಿ ಸೆಲ್ಫಿ ಹಾಗೂ ಫೋಟೋ ತೆಗೆದುಕೊಳ್ಳುತ್ತಿದ್ದರು.
ಅಲ್ಲದೆ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಮೇಲಿಂದ ನದಿಯೊಡಲು ನೋಡಲು ವಾಹನ ಸವಾರರು ಮಾರ್ಗಮಧ್ಯೆಯೇ ವಾಹನ ನಿಲ್ಲಿಸಿ ಸೇತುವೆ ಮೇಲಿಂದಲೇ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ನಗರದಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ವ್ಯಾಪಾರ, ವಹಿವಾಟು ಮಂದಗತಿಯಲ್ಲಿದೆ. ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಶೀತ ಗಾಳಿಗೆ ಚಳಿಯ ವಾತಾವರಣ ಸೃಷ್ಟಿಯಾಗಿದೆ. ಛತ್ರಿ, ಜರ್ಕಿನ್, ಸ್ವೆಟರ್ ಹೀಗೆ ವಿವಿಧ ರೀತಿಯ ಬೆಚ್ಚನೆಯ ಬಟ್ಟೆಗಳಿಗೆ ಮೊರೆ ಹೋಗಿದ್ದಾರೆ.
ರೈತರಲ್ಲಿ ಆತಂಕ
ಮಳೆ ಹಾಗೂ ಶೀತ ಗಾಳಿಯಿಂದ ಮೆಕ್ಕೆಜೋಳ, ಎಲೆ ಬಳ್ಳಿ, ಅಡಕೆ ಸೇರಿದಂತೆ ವಿವಿಧ ತೋಟಗಾರಿಕೆ ಮತ್ತು ಕೃಷಿ ಬೆಳೆಗಳಿಗೆ ಶೀತಬಾಧೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿರುವ ರೈತನಿಗೆ ಆತಂಕ ಎದುರಾಗಿದೆ. ಬಹುತೇಕ ರೈತರು ಬೆಳೆ ಉಳಿಸಿಕೊಳ್ಳಲು ಯೂರಿಯಾ ಬಳಕೆ ಸೇರಿದಂತೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.