ಹನುಮಸಾಗರ: ಕಾರ್ಮಿಕರು ಗುಳೆ ಹೋಗದೆ ಸ್ಥಳೀಯವಾಗಿಯೇ ನರೇಗಾ ಹಾಗೂ ಇತರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಪಿಡಿಒ ದೇವೇಂದ್ರಪ್ಪ ಕಮತರ ಹೇಳಿದರು.
ಸಮೀಪದ ಹೂಲಗೇರಿಯಲ್ಲಿ ಬುಧವಾರ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರಿಂದ ಮಕ್ಕಳ ಭವಿಷ್ಯ ಸಂಕಷ್ಟಕ್ಕೆ ಸಿಲುಕುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. 10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳೆತ್ತಲಾಗುತ್ತಿದ್ದು, 450ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವಾರ ಈ ಕಾಮಗಾರಿ ನಡೆಯಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ರೇಣುಕಾ ವೆಂಕನಗೌಡ, ಉಪಾಧ್ಯಕ್ಷ ಹನುಮಪ್ಪ ಯಮನಪ್ಪ ಗೊರೆಬಿಹಾಳ, ಗ್ರಾಪಂ ಸದಸ್ಯರು ಮತ್ತು ಕಾರ್ಮಿಕರಿದ್ದರು.