ಹನುಮಸಾಗರ: ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ರೈತರು ಒತ್ತಾಯಿಸಿದರು.
ಸಮೀಪದ ಹನುಮನಾಳ ಗ್ರಾಮದ ಐಟಿಐ ಕಾಲೇಜು ಆವರಣದಲ್ಲಿ ಭಾನುವಾರ ಸಭೆ ನಡೆಸಿದರು. ಕುಷ್ಟಗಿ ತಾಲೂಕು ವ್ಯಾಪ್ತಿಯ ಬಹುತೇಕ ರೈತರು ರಾತ್ರಿ ಜಮೀನಿನಲ್ಲಿ ವಾಸಿಸುತ್ತಾರೆ. ಜಮೀನುಗಳಲ್ಲಿ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರಿಂದ ರೈತರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಹಾವು ಕಚ್ಚಿ ಅನೇಕ ರೈತರು ಮೃತಪಟ್ಟಿದ್ದಾರೆ. ಇದರಿಂದಾಗಿ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು. ಮನವಿಗೆ ಸ್ಪಂದಿಸದಿದ್ದರೆ ಸೆ.13 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರಸಾಬ್ ಮೂಲಿಮನಿ ಹೇಳಿದರು.
ಹೋಬಳಿ ಘಟಕದ ಅಧ್ಯಕ್ಷ ಶ್ರೀಕಾಂತ ಅಂಗಡಿ, ಮುಖಂಡರಾದ ವೀರಣ್ಣ ಗಜೇಂದ್ರಗಡ, ಸಿದ್ದಪ್ಪ ಅಂಗಡಿ, ಮರಿಯಪ್ಪ ಗ್ವಾತಗಿ, ಗರಿಮಸಾಲ್ ಇಲಕಲ್, ಮುತ್ತಪ್ಪ ಪರಾಸಾಪುರ, ಕೆ.ಎಸ್.ಹನುಮಂತ, ಅಶೋಕ ವಾಲಿಕಾರ, ಶಂಕರ ಗಡಾದ, ಯಮನಪ್ಪ ಗಾಣದಾಳ ಇತರರಿದ್ದರು.