ಹನುಮಸಾಗರ: ಎಲೆಮರೆ ಕಾಯಿಯಂತೆ ಇರುವ ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ಸರ್ಕಾರ ಆರ್ಥಿಕ ಗಣತಿ ಮಾಡಿಸುತ್ತಿದೆ ಎಂದು ಪಿಡಿಒ ಬಸವರಾಜ ಸಂಕನಾಳ ಹೇಳಿದರು.
ಇಲ್ಲಿನ ಗ್ರಾಪಂ ಆವರಣದಲ್ಲಿ ಶುಕ್ರವಾರ ಮೊಬೈಲ್ ಆ್ಯಪ್ ಮೂಲಕ ಆರ್ಥಿಕ ಗಣತಿಗೆ ಚಾಲನೆ ನೀಡಿ, ಮಾತನಾಡಿದರು. ಕೇಂದ್ರ ಸರ್ಕಾರ 2013ರಲ್ಲಿ ಆರ್ಥಿಕ ಗಣತಿ ಮಾಡಿಸಿತ್ತು. ಆಗ ಹೆಚ್ಚು ಜನ ಹೈನುಗಾರಿಕೆ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಹೈನುಗಾರಿಕೆ ಉತ್ತೇಜಿಸುವ ದೃಷ್ಟಿಯಿಂದ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡಲಾಗಿದೆ. ಈ ಗಣತಿಯಿಂದ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವವರ ಲೆಕ್ಕ ತಿಳಿಯುತ್ತದೆ. ಸರ್ಕಾರದಿಂದ ಪರವಾನಗಿ ಪಡೆದವರು, ಸ್ವಂತ ವ್ಯಾಪಾರಸ್ಥರು, ಸ್ವಾವಲಂಬಿ ಜನರ ಮಾಹಿತಿ ತಿಳಿಯುತ್ತದೆ. ಆದ್ದರಿಂದ ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿ ಗಣತಿಗೆ ಬಂದಾಗ ಜನ ಸಹಕರಿಸಬೇಕು ಎಂದರು.
ಗ್ರಾಪಂ ಸದಸ್ಯರಾದ ಭವಾನಿಸಾ ಪಾಟೀಲ, ರಾಘವೇಂದ್ರ ವಡ್ಡರ, ಪ್ರಶಾಂತ ಕುಲಕರ್ಣಿ, ಗುರುರಾಜ ಮುಜುಂದಾರ್, ಮುಖಂಡರಾದ ಶ್ರೀನಿವಾಸ ಜಹಗೀರ್ದಾರ್, ಚಂದಪ್ಪ ವಾಲ್ಮೀಕಿ, ಸಾಮಾನ್ಯ ಸೇವಾ ಕೇಂದ್ರದ ವಸಂತ ಕುಮಾರ, ಚೈತ್ರಾ ಸಿನ್ನೂರ, ಶಶಿಕುಮಾರ್, ಹುಸೇನ ಕಟಗಿ ಇದ್ದರು.