ಹನೂರು: ತಾಳುಬೆಟ್ಟದ ಚೆಕ್ಪೋಸ್ಟ್ನಲ್ಲಿಯೇ ಜನರನ್ನು ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಗೂಡ್ಸ್ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಶಾಸಕ ಆರ್.ನರೇಂದ್ರ ಸೂಚಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಸೋಮವಾರ ಕೋವಿಡ್ 19 ತಡೆಗಟ್ಟುವ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಗುಂಪು ಸೇರದಂತೆ ನೋಡಿಕೊಳ್ಳಬೇಕು, ಮೆರವಣಿಗೆ, ಹಬ್ಬ ಹಾಗೂ ಜಾತ್ರೆ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಲಾಕ್ಡೌನ್ ಸಡಿಲಗೊಂಡ ಬಳಿಕ ಮಹದೇಶ್ವರ ಬೆಟ್ಟಕ್ಕೆ ಭಕ್ತರು ತಾಳುಬೆಟ್ಟದ ಮೂಲಕ ಆಗಮಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಮ.ಬೆಟ್ಟದ ಸುತ್ತಮುತ್ತ ಸಂಚರಿಸಿ ದೇಗುಲಕ್ಕೆ ಆಗಮಿಸುತ್ತಾರೆ. ಈ ವೇಳೆ ಮಾತ್ರ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುತ್ತಿದೆ. ಆದ್ದರಿಂದ ಸೋಂಕು ತಗುಲುವ ಸಂಭವ ಹೆಚ್ಚಿದೆ. ಹಾಗಾಗಿ ತಾಳುಬೆಟ್ಟದ ಚೆಕ್ಪೋಸ್ಟ್ನಲ್ಲೇ ತಪಾಸಣೆ ನಡೆಸಿ ಎಂದು ಸೂಚಿಸಿದರು.
ಇತ್ತೀಚೆಗೆ ಈ ಭಾಗದಲ್ಲಿ ಜೂಜಾಟ ಹೆಚ್ಚಾಗಿದೆ. ಮದುವೆ ಹಾಗೂ ಶುಭ ಕಾರ್ಯಗಳಲ್ಲಿ 50 ಜನರು ಮಾತ್ರ ಭಾಗವಹಿಸಲು ಅವಕಾಶವಿದ್ದರೂ ಹೆಚ್ಚಿನ ಜನರು ಭಾಗವಹಿಸುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕಿದೆ. ಉಳಿದಂತೆ ಬೇರೆಡೆಯಿಂದ ಗ್ರಾಮಕ್ಕೆ ಬಂದವರ ಮಾಹಿತಿ ನೀಡುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕಿದೆ. ಸೀಲ್ ಹಾಕಿಸಿಕೊಂಡಿರುವವರು ಹೋಮ್ ಕ್ವಾರಂಟೈನ್ನಲ್ಲಿರದೆ ಅನ ಗತ್ಯವಾಗಿ ಸುತ್ತಾಡುವುದು ಕಂಡು ಬಂದರೆ ಮುಲಾಜಿಲ್ಲದೇ ಕ್ರಿಮಿನಲ್ ಕೇಸು ದಾಖಲಿಸುವುದರ ಮೂಲಕ ಕೋವಿಡ್ ಸಂಬಂಧ ಇನ್ನು ಹೆಚ್ಚಿನ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಮ. ಬೆಟ್ಟದ ಇನ್ಸ್ಪೆಕ್ಟರ್ ಮಹೇಶ್, ರಾಮಾಪುರ ಇನ್ಸ್ಪೆಕ್ಟರ್ ಮನೋಜ್ಕುಮಾರ್, ಹನೂರು ಇನ್ಸ್ಪೆಕ್ಟರ್ ರವಿನಾಯಕ್, ತಹಸೀಲ್ದಾರ್ ಬಸವರಾಜು ಚಿಗರಿ ಮಾತನಾಡಿದರು. ಡಿವೈಎಸ್ಪಿ ನವೀನ್ಕುಮಾರ್, ಕೊಳ್ಳೇಗಾಲ ತಹಸೀಲ್ದಾರ್ ನವೀನ್ಕುಮಾರ್, ಕೋವಿಡ್ ನೋಡಲ್ ಅಧಿಕಾರಿ ಟಿ.ಆರ್ ಸ್ವಾಮಿ, ಡಾ.ಪುಷ್ಪಾರಾಣಿ, ಪಪಂ ಮುಖ್ಯಾಧಿಕಾರಿ ಮೂರ್ತಿ ಹಾಜರಿದ್ದರು.