ಶಿವಮೊಗ್ಗ: ಕರ್ನಾಟಕದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಕಾರ್ಡ್ ಯೋಜನೆಯನ್ನು ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು. ಜನಪರ ಯೋಜನೆಗಳ ಮೂಲಕ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಈ ಬಾರಿ ಹೊಸ ಚರಿತ್ರೆ ಸೃಷ್ಟಿ ಮಾಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲ ಹೇಳಿದರು.
ಗಾಡಿಕೊಪ್ಪದ ಲಗಾನ್ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ನಿಂದ ಗ್ಯಾರೆಂಟಿ ಕಾರ್ಡ್ ವಿತರಣೆ ಮತ್ತು ಜಿಲ್ಲಾಮಟ್ಟದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮನೆಯ ಒಬ್ಬ ಗೃಹಿಣಿಗೆ 2 ಸಾವಿರ ರೂ., ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಬಿಪಿಎಲ್ ಕಾರ್ಡ್ನ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು. ಅಧಿಕಾರಕ್ಕೆ ಬಂದ ಮೊದಲ ದಿನವೇ ಸಚಿವ ಸಂಪುಟ ಸಭೆ ನಡೆಸಿ ಗ್ಯಾರಂಟಿ ಕಾರ್ಡ್ನಲ್ಲಿರುವ ಭರವಸೆಗಳನ್ನು ಈಡೇರಿಸಲಾಗುವುದು ಎಂದರು.
ಕಾಂಗ್ರೆಸ್ ನೀಡುವ ಭರವಸೆಗಳಿಗೆ ಹಣ ಎಲ್ಲಿಂದ ಹೊಂದಿಸುತ್ತಾರೆಂಬ ಪ್ರಶ್ನೆ ಹಲವರಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ 3.10 ಲಕ್ಷ ಕೋಟಿ ಬಜೆಟ್ ಮಂಡನೆ ಆಗಿದೆ. ಬಿಜೆಪಿಯವರು ಶೇ.40ರಷ್ಟು ಕಮೀಷನ್ ಪಡೆಯುತ್ತಿದ್ದು ಅದೇ ಹಣ 1.20 ಲಕ್ಷ ಕೋಟಿ ದಾಟುತ್ತಿದೆ. ಈ ಎಲ್ಲ ಯೋಜನೆಗಳಿಗೆ 20ರಿಂದ 30 ಕೋಟಿ ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಬಿಜೆಪಿಯವರು ನೂರಾರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದು ಅದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಿದರೆ ಈ ಮೊತ್ತವನ್ನು ಹೊಂದಿಸುವುದು ದೊಡ್ಡ ಸವಾಲೇನಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಕಾರ್ಡ್ನಲ್ಲಿರುವ ಮೂರ ಯೋಜನೆಗಳ ಜತೆಗೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ಸಚಿವರು, ಶಾಸಕರು ಸೇರಿದಂತೆ ಪಕ್ಷದ ಯಾರೇ ಭ್ರಷ್ಟಾಚಾರದಲ್ಲಿ ತೊಡದರೆ ಖಚಿತವಾಗಿ ಕ್ರಮ ಕೈಗೊಳ್ಳುತ್ತೇವೆ. ಮುಂದಿನ 10 ದಿನಗಳಲ್ಲಿ ರಾಜ್ಯದ ಎಲ್ಲರ ಮನೆ ಮನೆಗೂ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಾಗುವುದು. ಜನರ ಹಣ ಜನರಿಗೆ ತಲುಪಿಸುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಜನಸೇವೆ ಮಾಡುವ ಗುರಿ ಹೊಂದಿದ್ದೇವೆ ಎಂದು ಭರವಸೆ ನೀಡಿದರು.