ತುರುವೇಕೆರೆ: ಸಂಸ್ಕಾರ ಬೆಳೆಸಿಕೊಂಡರೆ ಸಮಾಜದ ಬೆಳವಣಿಗೆ ಸಾಧ್ಯ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಭಾನುವಾರ ಹಳ್ಳಿಕಾರ್ ಮಠ ಉದ್ಘಾಟನೆ, ಮಠದ ನೂತನ ಸ್ವಾಮೀಜಿ ದೀಕ್ಷೆ ಹಾಗೂ ಪೀಠಾರೋಹಣ
ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಭಿಮಾನಿಗಳಾದ ಹಳ್ಳಿಕಾರ್ ಸಮಾಜಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನಾವು ಯಾವುದೇ ಸಮಾಜದಲ್ಲಿ ಹುಟ್ಟಿದರೂ ಚುಂಚನಗಿರಿಶ್ರೀ, ಸಿದ್ಧಗಂಗಾಶ್ರೀಗಳ ಸಂಸ್ಕಾರ, ಮಾರ್ಗದರ್ಶನದಂತೆ ಸಮಾಜಕ್ಕೆ ಸಹಾಯ ಮಾಡಬೇಕಿದೆ ಎಂದರು.
ಹಳ್ಳಿಕಾರ್ ಜನಾಂಗ ದೇಶದ ಉದ್ದಗಲಕ್ಕೂ ಸಂಪ್ರದಾಯ ತಿಳಿಸುವ ಕೆಲಸ ಮಾಡುತ್ತಿದೆ. ಮುಂದಿನ ವರ್ಷ 10 ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿ ದಾಸೋಹವನ್ನು ನಾನೇ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಜಯರಾಂ ನನ್ನ ಸಹೋದರ: ಕ್ಷೇತ್ರದ ಶಾಸಕ ಮಸಾಲಾ ಜಯರಾಂ ನನ್ನ ಕಿರಿಯ ಸಹೋದರ ಇದ್ದಂತೆ. ಮೊದಲ ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅವರನ್ನು ಸಮುದಾಯದ ಜನ ಆಶೀರ್ವದಿಸಿ. ಕ್ಷೇತ್ರಕ್ಕೆ ಎಷ್ಟು ಬೇಕೋ ಅಷ್ಟು ಆಶ್ರಯ ಮನೆಗಳನ್ನು ನೀಡುತ್ತೇನೆ
ಎಂದು ಸೋಮಣ್ಣ ಹೇಳಿದರು.
ಮಠಕ್ಕೆ ಸರ್ಕಾರದಿಂದ ಅನುದಾನ: ಈ ಭಾಗದಲ್ಲಿ ಬಹು ಬೇಡಿಕೆಯಾಗಿರುವ 16 ಕೋಟಿ ರೂ. ವೆಚ್ಚದ ವಿದ್ಯುತ್ ಉಪಸ್ಥಾವರ ಸ್ಥಾಪಿಸಲಾಗುವುದು. ರಸ್ತೆ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಳ್ಳಿಕಾರ್ ಮಠ ಹೆಚ್ಚು ಅಭಿವೃದ್ಧಿಯಾಗಿ ಬಡವರಿಗೆ, ದೀನ-ದಲಿತರಿಗೆ ಸಹಕಾರಿಯಾಗಲಿ. ಮಠದಿಂದ ಉನ್ನತ ಶಿಕ್ಷಣ ಸಿಗುವಂತಾಗಲಿ. ಮಠಕ್ಕೆ ಸರ್ಕಾರದಿಂದ 20 ಲಕ್ಷ ರೂ.ಅನುದಾನ, ಜಮೀನು ಮಂಜೂರು ಸೇರಿ ವೈಯಕ್ತಿಕ 5 ಲಕ್ಷ ರೂ.ನೀಡಲಾಗುವುದು ಎಂದು ಶಾಸಕ ಮಸಾಲಾ ಜಯರಾಂ ೋಷಿಸಿದರು.
ಶ್ರೀ ಕೃಷ್ಣಾನಂದ ಸ್ವಾಮೀಜಿ ಪೀಠಾಧಿಪತಿ: ಶ್ರೀಕೃಷ್ಣಾನಂದ ಸ್ವಾಮೀಜಿ ಅವರನ್ನು ಹಳ್ಳಿಕಾರ್ ಮಠದ ನೂತನ ಪೀಠಾಧಿಪತಿಗಳಾಗಿ ಘೋಷಣೆ ಮಾಡಲಾಯಿತು. ಕೃಷ್ಣಾನಂದ ಸ್ವಾಮೀಜಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಬಿದರನಕಟ್ಟೆ ಗ್ರಾಮದವರು. ಮೂಲ ಹೆಸರು ಬ್ಯಾಲೇಗೌಡ. ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಸೇವೆ ಸಲ್ಲಿಸಿ, ಧಾರ್ಮಿಕ ಪ್ರವರ್ತಕರಾಗಿ ಆಸ್ಟ್ರೇಲಿಯಾಗೆ ತೆರಳಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.
ಮಠಕ್ಕೆ 5ಲಕ್ಷ ರೂ. ದೇಣಿಗೆ: ಒಕ್ಕಲಿಗರ ಸಮಾಜದ ಪಂಗಡಗಳಲ್ಲಿ ಒಂದಾದ ವಿಶ್ವವಿಖ್ಯಾತ ರಾಸುಗಳನ್ನು ನೀಡುವ ಹಳ್ಳಿಕಾರ್ ಜನಾಂಗದ ಮಠ ಪ್ರಾರಂಭವಾಗಿದೆ. ಮಠದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ. ವೈಯಕ್ತಿಕವಾಗಿ 5 ಲಕ್ಷ ರೂ. ದೇಣಿಗೆ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಬೆಂಗಳೂರಿನ ಯೋಗಪಟು ಚೈತನ್ಯಗೆ ಸನ್ಮಾನ: 3 ಚಿನ್ನದ ಪದಕ ವಿಜೇತ ಯೋಗಪಟು ಬೆಂಗಳೂರಿನ ಚೈತನ್ಯ ಯೋಗ ಪ್ರದರ್ಶಿಸಿದರು. ಹಲವು ಕಲಾ ತಂಡಗಳು ಭರತನಾಟ್ಯ ಪ್ರದರ್ಶಿಸಿದವು. ಮಠದ ಆವರಣದಲ್ಲಿ ಮಸಾಲಾ ಜಯರಾಂ ಅವರ 26 ಲಕ್ಷ ರೂಪಾಯಿ ಮೌಲ್ಯದ ಏಕಲವ್ಯ ಹಳ್ಳಿಕಾರ್ ಹೋರಿ ಪ್ರದರ್ಶಿಲಾಯಿತು. ಜನರು ಹಳ್ಳಿಕಾರ್ ಹೋರಿ, ರಾಸುಗಳ ಮುಂದೆ ನಿಂತು ಸೆಲ್ಫಿ ತೆಗೆಸಿಕೊಂಡರು. ವಿವಿಧ ಕ್ಷೇತ್ರದ ಸಾಧಕರು ಹಾಗೂ ಮಠಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಹಳ್ಳಿಕಾರ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ, ಸೌಮ್ಯಾನಂದ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
1.ಮಾಯಸಂದ್ರ ಹೋಬಳಿಯ ಶೆಟ್ಟಗೊಂಡನಹಳ್ಳಿಯಲ್ಲಿ ಭಾನುವಾರ ಹಳ್ಳಿಕಾರ್ ಮಠ ಉದ್ಘಾಟನೆ, ಮಠದ ನೂತನ ಸ್ವಾಮೀಜಿ ದೀಕ್ಷೆ ಹಾಗೂ ಪೀಠಾರೋಹಣ ಕಾರ್ಯಕ್ರಮ ದಲ್ಲಿ ಸಚಿವ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ಹಳ್ಳಿಕಾರ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸೌಮ್ಯಾನಂದ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಟ್ರಸ್ಟ್ ಗೌರವಾಧ್ಯಕ್ಷ ಡಾ.ಬಿ.ಎಂ.ಪಟೇಲ್ ಪಾಂಡು ಇತರರಿದ್ದರು. 2.ಮಠದ ನೂತನ ಪೀಠಾಧಿಪತಿ ಶ್ರೀ ಕೃಷ್ಣಾನಂದ ಸ್ವಾಮೀಜಿ.
ಹಳ್ಳಿಕಾರ್ ಮಠದ ಉದ್ಘಾಟನೆ, ಮಠದ ನೂತನ ಸ್ವಾಮೀಜಿ ದೀಕ್ಷೆ ,ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ.
ಮಠದ ಟ್ರಸ್ಟ್ ಗೌರವಾಧ್ಯಕ್ಷ ಡಾ.ಬಿ.ಎಂ.ಪಟೇಲ್ ಪಾಂಡು, ಡಾ.ರಂಗ ಶ್ರೀರಂಗಸ್ವಾಮಿ, ವಿ.ದಯಾನಂದ, ಅಧ್ಯಕ್ಷ ನಾಗಯ್ಯ, ಉಪಾಧ್ಯಕ್ಷರಾದ ಸೋಮಶೇಖರ್, ತಿಮ್ಮರಾಜು, ಪುಟ್ಟೇಗೌಡ, ಕೃಷ್ಣಮೂರ್ತಿ ಇದ್ದರು.