ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನವನ್ನು ಹೊಂದಿದ್ದ ವ್ಯಕ್ತಿಯನ್ನು ಅಪಹರಿಸಿ ದರೋಡೆ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಮತ್ತು ಮೂಡುಬಿದರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ೧೧ ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಜೋಕಟ್ಟೆಯ ಅಬ್ದುಲ್ ಸಲಾಂ ಯಾನೇ ಪಟೌಡಿ (೩೪), ಮೊಹಮ್ಮದ್ ಶಾರೂಕ್(೨೬), ಬೆಂಗಳೂರು ಜೆ.ಪಿ.ನಗರದ ಸೈಯದ್ ಹೈದರಾಲಿ(೨೯), ಅಸೀಫ್ ಆಲಿ(೨೮), ಮುಂಬೈ ಅಂಬೇಡ್ಕರ್ ಸ್ಟ್ರೀಟ್ನ ಅಬ್ದುಲ್ ಶೇಖ್(೨೨), ಕಾಂಬೇಕರ್ ಸ್ಟ್ರೀಟ್ನ ಶಾಬಾಸ್ ಹುಸೈನ್(೪೯), ಭೀವಂಡಿಯ ಮುಶಾಹಿದ್ ಅನ್ಸಾರಿ(೩೮), ಕಾಂಬೇಕರ್ ಸ್ಟ್ರೀಟ್ನ ಶೇಖ್ ಸಾಜಿದ್ ಹುಸೈನ್(೪೯), ಮೊಹಮ್ಮದ್ ಅಲಿ ರೋಡ್ನ ಮುಸ್ತಾಕ್ ಖುರೇಷಿ(೪೨), ಬೆಳುವಾಯಿ ಕರಿಯಂಗಡಿಯ ಮೊಹಮ್ಮದ್ ಮಹಜ್(೨೦), ಕಾಸರಗೋಡು ಉಪ್ಪಳದ ಮೊಹಮ್ಮದ್ ಅದಿಲ್ ಬಂದಿತರು.
ಮೇ ತಿಂಗಳ ಮೊದಲ ವಾರದಲ್ಲಿ ಮುಂಬೈಯ ರೆಹಮಾನ್ ಶೇಖ್ ಎಂಬವರು ಮೂಡುಬಿದಿರೆ ನಿವಾಸಿ ವಕಾರ್ ಯೂನುಸ್ ಮೂಲಕ ಅವರ ಸಂಬಂಧಿ ಬೆಂಗಳೂರಿನ ಹೈದರಾಲಿ ಎಂಬವರಿಗೆ ನೀಡುವಂತೆ ಒಂದು ಪಾರ್ಸಲ್ ಕೊಟ್ಟಿದ್ದರು. ಈ ಕುರಿತು ಮಾಹಿತಿ ತಿಳಿದ ವಕಾರ್ ನ ಸ್ನೇಹಿತ ಬೆಳುವಾಯಿ ನಿವಾಸಿ ಮಹಝ ವಕಾರ್ನನ್ನು ನೇರವಾಗಿ ಬೆಳುವಾಯಿಗೆ ಬರುವಂತೆ ತಿಳಿಸಿದ್ದನು. ಮೂಡುಬಿದಿರೆಯ ಪುಚ್ಚಮೊಗರು ಎಂಬಲ್ಲಿ
ಮಹಝ್, ಉಪ್ಪಳದ ಅದಿಲ್ ಹಾಗೂ ಆತನ ಇತರ ಸ್ನೇಹಿತರು ಮೇ೬ರಂದು ಭೇಟಿಯಾಗಿ, ಆತನನ್ನುಕೇರಳದ ಉಪ್ಪಳಕ್ಕೆ ಕರೆದುಕೊಂಡು ಹೋಗಿ ಆತನ ಬಳಿ ಪಾರ್ಸಲ್ನಲ್ಲಿದ್ದ ೪೪೦ ಗ್ರಾಂ ಚಿನ್ನವನ್ನು ದರೋಡೆ ಮಾಡಿ ಬಿಟ್ಟು ಕಳುಹಿಸಿದ್ದರು. ಪಾರ್ಸಲ್ ತಲುಪದ ಹಿನ್ನೆಲೆಯಲ್ಲಿ ರೆಹಮಾನ್ ಶೇಖ್ ಮತ್ತ ಹೈದರಾಲಿಯವರು ವಕಾರ್ ಬಳಿ ಪಾರ್ಸಲ್ ಬಗ್ಗೆ ವಿಚಾರಿಸಿದ್ದು, ದರೋಡೆ ಕುರಿತು ಅವರಿಗೆ ಮಾಹಿತಿ. ಆದರೆ ಇದನ್ನು ನಂಬದ ಅವರು, ತಮ್ಮ ಚಿನ್ನವನ್ನು ವಾಪಾಸು ನೀಡದಿದ್ದಲ್ಲಿ ಸುಮ್ಮನೇ ಬಿಡುವುದಿಲ್ಲ ಎಂದು ಹೇಳಿ ಜೋಕಟ್ಟೆಯ ಅಬ್ದುಲ್ ಸಲಾಂ ಯಾನೇ ಪಟೌಡಿ ಬಳಿ ಎಂಬುವನ ಮೂಲಕ ಕೊಲೆ ಬೆದರಿಕೆ ಹಾಕಿಸಿದ್ದರು. ಇದರಿಂದ ಕಂಗಾಲಾದ ವಕಾರ್ ಮೇ 21ರಂದು ಮೂಡುಬಿದಿರೆ ಠಾಣೆಯಲ್ಲಿ ಚಿನ್ನ ದರೋಡೆ ಕುರಿತು ದೂರು ನೀಡಿದ್ದ.
ಇದಕ್ಕೆ ಸಂಬಂಧಿಸಿ ಬೆಳುವಾಯಿ ಕರಿಯಂಗಡಿಯ ಮೊಹಮ್ಮದ್ ಮಹಜ್(೨೦), ಕಾಸರಗೋಡು ಉಪ್ಪಳದ ಮೊಹಮ್ಮದ್ ಅದಿಲ್ನ್ನು ಪೊಲೀಸರು ಬಂಧಿಸಿದ್ದರು. ಕಾಂಞಗಾಡ್ ನ ಜ್ಯುವೆಲ್ಲರಿಗೆ ಮಾರಿದ ೧೩,೮೬,೬೦೦ ರೂ. ಮೌಲ್ಯದ ೩೦೦ ಗ್ರಾಂಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಉಳಿದ ಆರೋಪಿತರ ಪತ್ತೆ ಕಾರ್ಯ ಮತ್ತು ಪ್ರಕರಣದ ತನಿಖೆ ಮುಂದುವರಿದಿದೆ.
*ಹತ್ಯೆಗೆ ಸಂಚು:
ಈ ನಡುವೆ ಚಿನ್ನ ದೊರೆಯದ ಹಿನ್ನೆಲೆಯಲ್ಲಿ ಅಬ್ದುಲ್ ರೆಹಮಾನ್ ಶೇಖ್ ರೌಡಿಶೀಟರ್ ಜೋಕಟ್ಟೆಯ ಅಬ್ದುಲ್ ಸಲಾಂ ಯಾನೇ ಪಟೌಡಿಗೆ 5 ಲಕ್ಷ ರೂ.ಸುಪಾರಿ ನೀಡಿ ವಕಾರ್ ಮತ್ತು ಮಹಜ್ ಬಳಿ ಚಿನ್ನ ವಸೂಲಿ ಮಾಡುವಂತೆ ತಿಳಿಸಿದ್ದು, ಚಿನ್ನ ದೊರೆಯದಿದ್ದರೆ ಹತ್ಯೆ ಮಾಡುವಂತೆ ತಿಳಿಸಿದ್ದ. ಅದರಂತೆ ಮೇ 24ರಂದು ಪಟೌಡಿ ತನ್ನ ಸಹಚರರೊಂದಿಗೆ ಮೂಡುಬಿದರೆ ಬೆಳುವಾಯಿ ಬಳಿಯ ಮಹಜ್ ಮನೆಯಿಂದ ಸ್ವಲ್ಪ ದೂರದಲ್ಲಿ ಎರಡು ಕಾರುಗಳಲ್ಲಿ ೩ ತಲವಾರು ಮತ್ತು ೨ ಕತ್ತಿಗಳನ್ನು ಇಟ್ಟು ಕಾಯುತ್ತಿದ್ದು. ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.