ಉತ್ತರಪ್ರದೇಶ: ಲೈಂಗಿಕ ಕಿರುಕುಳ ವಿರೋಧಿಸಿದ ಬಾಲಕಿಯನ್ನು ಯುವಕರ ಗುಂಪು ರೈಲು ಹಳಿಗೆ ತಳ್ಳಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ರೈಲಿಗೆ ಎಸೆದ ನಂತರ 17 ವರ್ಷದ ಬಾಲಕಿ ಒಂದು ಕೈ ಮತ್ತು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ.
ಉತ್ತರ ಪ್ರದೇಶದ ಕದಾವ್ ರೇಲ್ವೇ ಸ್ಟೇಷನ್ ಬಳಿ ಘಟನೆ ನಡೆದಿದ್ದು, ಬಾಲಕಿಯ ತಂದೆ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಬರೇಲಿ ನಗರದ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಂದೆಯ ಪ್ರಕಾರ, ಅವರ ಮಗಳು ಮಂಗಳವಾರ ಸಂಜೆ 4.30 ರ ಸುಮಾರಿಗೆ ತನ್ನ ಕೋಚಿಂಗ್ ಸೆಂಟರ್ನಿಂದ ಹಿಂದಿರುಗುತ್ತಿದ್ದಾಗ ಅದೇ ಗ್ರಾಮದ ವ್ಯಕ್ತಿ ವಿಜಯ್ ಮೌರ್ಯ ಎಂಬಾತ ಅವಳನ್ನು ತಡೆದು ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ. ಮೌರ್ಯ ಜತೆಗೆ ಮತ್ತೊಬ್ಬ ವ್ಯಕ್ತಿಯೂ ಇದ್ದು ಆತ ಇವರಿಬ್ಬರ ಸಂಭಾಷಣೆಯನ್ನೂ ಗಮನಿಸಿದ್ದಾನೆ.
ಈಗಾಗಲೇ ಕೈ-ಕಾಲು ಕಳೆದುಕೊಂಡ ಯುವತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇರೆಗೆ, ಮೌರ್ಯ ವಿರುದ್ಧ ಸೆಕ್ಷನ್ 307 (ಕೊಲೆಗೆ ಯತ್ನ), 342 (ಯಾರನ್ನಾದರೂ ಬಲವಂತವಾಗಿ ತಡೆಯುವುದು), 504 (ಉದ್ದೇಶಪೂರ್ವಕವಾಗಿ ಅವಮಾನ), ಮತ್ತು 326 (ಅಪಾಯಕಾರಿ ವಿಧಾನಗಳಿಂದ ತೀವ್ರವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿಜಯ್ ಮೌರ್ಯ ಮತ್ತು ಅವರ ತಂದೆ ಕೃಷ್ಣ ಪಾಲ್ ಅವರನ್ನು ಬಂಧಿಸಲಾಗಿದೆ ಎಂದು ಸಿಬಿ ಗಂಜ್ ಪೊಲೀಸ್ ಪೊಲೀಸ್ ಠಾಣೆಗೆ ಹೊಸದಾಗಿ ನೇಮಕಗೊಂಡ ಇನ್ಸ್ಪೆಕ್ಟರ್ ರಾಧೇಶ್ಯಾಮ್ ಹೇಳಿದ್ದಾರೆ.
ಹುಡುಗಿಯ ತಂದೆಯ ಪ್ರಕಾರ ಅವರ ಮಗಳು ತಪ್ಪಿಸಿಕೊಳ್ಳಲು ಖಾದೌ ಕಡೆಗೆ ಓಡಿದಳು ಆದರೆ ಮೌರ್ಯ ಅವಳನ್ನು ರೈಲಿನ ಮುಂದೆ ತಳ್ಳಿ ಬಿಟ್ಟಿದ್ದಾನೆ. ಸದ್ಯ ಆರೋಪಿ ವಿಜಯ್ ಮೌರ್ಯ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕರಣವನ್ನು ಗಣನೆಗೆ ತೆಗೆದುಕೊಂಡಿದ್ದು, ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ತಿಳಿಸಿದ್ದಾರೆ.
ಬಾಲಕಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಕೆಯನ್ನ ಸಕಲ ಸೌಲಭ್ಯವುಳ್ಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಆಕೆಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.