ಗಂಗಾವತಿ: ನಗರದ 27ನೇ ವಾರ್ಡ್ನಲ್ಲಿ ವಾಸವಿರುವ ಅಲೆಮಾರಿ ಸಮುದಾಯಕ್ಕೆ ವಸತಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಶಾಸಕ ಪರಣ್ಣ ಮುನವಳ್ಳಿ ಗೃಹ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಸಿಂಧೋಳೆ, ಚನ್ನದಾಸರು, ಶಿಳ್ಳೆ ಕ್ಯಾತರ್ ಸಮುದಾಯದ ಪ್ರತಿನಿಧಿಗಳೊಂದಿಗೆ ಪ್ರತಿಭಟಿಸಿದ ಸದಸ್ಯರು ಬೇಡಿಕೆ ಮನವಿಯನ್ನು ಸಲ್ಲಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, 27ನೇ ವಾರ್ಡ್ನಲ್ಲಿ ಐದು ದಶಕಗಳಿಂದ ಸೂಕ್ತ ವ್ಯವಸ್ಥೆಯಿಲ್ಲದ ಗುಡಿಸಲಿನಲ್ಲಿ ಅಲೆಮಾರಿಗಳು ವಾಸವಾಗಿದ್ದು, ಸ್ವಂತ ನಿವೇಶನ ಮತ್ತು ಮನೆಗಳಿಲ್ಲ.
ಒಂದೇ ಗುಡಿಸಲಿನಲ್ಲಿ ನಾಲ್ಕೈದು ಕುಟುಂಬಗಳಿದ್ದು, ಕಸ, ಚಿಂದಿ ಆರಿಸುವುದು, ಭಿಕ್ಷೆ ಬೇಡುವ ಕಾಯಕದಲ್ಲಿದ್ದಾರೆ. ಎಸ್ಸಿ ಮೀಸಲಿನಲ್ಲಿದ್ದರೂ ವಸತಿ ಯೋಜನೆಯಡಿ ಗೃಹ ಭಾಗ್ಯ ಸಿಕ್ಕಿಲ್ಲ. ವ್ಯವಸ್ಥೆ ಕಲ್ಪಿಸದಿದ್ದರೆ ಸಮುದಾಯ ಮುಂಬರುವ ಚುನಾವಣೆಯಿಂದ ದೂರ ಉಳಿಯಲಿದೆ. ಕೂಡಲೇ ನಿವೇಶನ ಮತ್ತು ಮನೆಗಳ ನಿರ್ಮಾಣಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಮಾಜಕಲ್ಯಾಣಧಿಕಾರಿ ಶರಣಪ್ಪ ರಾಥೋಡ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೂ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಕೃಷ್ಣ ಬುಡ್ಗಜಂಗಮ, ಪಿ.ಯಲ್ಲಪ್ಪ ಸಿಂಧೊಳ್ಳಿ, ಮಂಜುನಾಥ ಚೆನ್ನದಾಸರ್, ಎಚ್.ಸಿ.ಹಂಚಿನಾಳ, ಜಡಿಯಪ್ಪ, ದೇವಪ್ಪ ಕರಡಿ, ರಮೇಶ, ಪಂಪಾಪತಿ, ಶಿವಶಾಂತ, ಬಿಸ್ಮಿಲ್ಲಾಖಾನ್ ಇತರರಿದ್ದರು.