ಗಂಗಾವತಿ: ಮಸಣ ಕಾರ್ಮಿಕರನ್ನು ನೌಕರರನ್ನಾಗಿ ನೇಮಿಸಿಕೊಳ್ಳುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮಸಣ ಕಾರ್ಮಿಕರ ಸಂಘ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್ಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕ ನಿರುಪಾದಿ ಬೆಣಕಲ್ ಮಾತನಾಡಿ, ಮಸಣ ಕಾರ್ಮಿಕರು ಜೀವನ ಭದ್ರತೆಯಿಲ್ಲದೇ ದುಡಿಯುತ್ತಿದ್ದು, ಕನಿಷ್ಠ ಸೌಲಭ್ಯಗಳಿಲ್ಲ. ಅಂತ್ಯಕ್ರಿಯೆ ನೆರವೇರಿಸುವ ಕಾರ್ಮಿಕರನ್ನು ಮಸಣ ನಿರ್ವಾಹಕ ಎಂದು ಪರಿಗಣಿಸಿ, ಸ್ಥಳೀಯ ಸಂಸ್ಥೆಗಳ ಮೂಲಕ ವೇತನ ನಿಗದಿಪಡಿಸಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕಾರ್ಯಕ್ಕೆ ಕನಿಷ್ಠ ಮೂರು ಸಾವಿರ ರೂ. ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.
ತಾಲೂಕು ಸಂಚಾಲಕ ಶಿವಣ್ಣ ಬೆಣಕಲ್, ಪದಾಧಿಕಾರಿಗಳಾದ ದುರುಗಪ್ಪ ಬಂಡ್ರಾಳ್, ಪವಾಡಪ್ಪ, ದುರುಗಪ್ಪ ಕನ್ನೇರಮಡವು, ಹನುಮಂತಪ್ಪ, ಅಂಬಣ್ಣ, ಮೌಲಪ್ಪ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಶಿವಕುಮಾರ, ಮಂಜುನಾಥ ಡಗ್ಗಿ ಇತರರಿದ್ದರು.