ಗಂಗಾವತಿ: ನಿರಂತರ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡರೆ ಮಧುಮೇಹ ಹತೋಟಿಯಲ್ಲಿ ಇರಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ.ಕೆ.ಎನ್.ಮಧುಸೂದನ್ ಹೇಳಿದರು.
ವಿಶ ್ವಮಧುಮೇಹ ದಿನ ನಿಮಿತ್ತ ಭಾರತೀಯ ವೈದ್ಯಕೀಯ ಸಂಘ, ಮೈತ್ರಿ ತಾಲೂಕು ಘಟಕ ಮತ್ತು ಲಯನ್ಸ್ ಕ್ಲಬ್ ಭಾನುವಾರ ಆಯೋಜಿಸಿದ್ದ ವೈದ್ಯರ ನಡಿಗೆ ಆರೋಗ್ಯ ಕಡೆಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಒತ್ತಡದ ಜೀವನ, ಆಹಾರ ಕ್ರಮದ ವ್ಯತ್ಯಾಸದಿಂದ ಮಧುಮೇಹ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿದ್ದು, 100ರಲ್ಲಿ 60 ಜನರಿಗೆ ಸಕ್ಕರೆ ಕಾಯಿಲೆ ಇರುವುದು ಸರ್ವೇಯಿಂದ ದೃಢಪಟ್ಟಿದೆ. ರೋಗ ನಿರ್ಲಕ್ಷಿಸಿದರೆ ಕಣ್ಣು, ಕಿಡ್ನಿ ಸೇರಿ ಇತರ ಅಂಗಾಂಗಗಳ ಮೇಲೆ ಪರಿಣಾಮ ಬೀರಲಿದ್ದು, ಆಹಾರ ಕ್ರಮಗಳನ್ನು ಬದಲಿಸಿಕೊಳ್ಳುವಂತೆ ಸಲಹೆ ನೀಡಿದರು.
ಐಎಂಎ ಭವನದಿಂದ ಶ್ರೀಕೃಷ್ಣ ದೇವರಾಯ ವೃತ್ತದವರೆಗೆ ಜಾಥಾ ನಡೆಯಿತು. ಸಂಘದ ಕಾರ್ಯದರ್ಶಿ ಡಾ.ಜಿ.ಪಿ.ಮಹಾಂತೇಶ, ಪದಾಧಿಕಾರಿಗಳಾದ ಡಾ.ಅಮರೇಶ ಅರಳಿ, ಡಾ.ಸತೀಶ್ ರಾಯ್ಕರ್, ಹಿರಿಯ ವೈದ್ಯರಾದ ವಿ.ವಿ.ಚಿನಿವಾಲರ್, ಎ.ಹನುಮಂತಪ್ಪ, ಶಿವಕುಮಾರ ಮಾಲಿಪಾಟೀಲ್, ಎಸ್.ಜಿ.ಮಟ್ಟಿ, ಮೈತ್ರಿ ಘಟಕದ ಪದಾಧಿಕಾರಿಗಳಾದ ಡಾ.ಸುಲೋಚನಾ ಚಿನಿವಾಲರ್, ಡಾ.ಎಸ್.ಜಿ.ಅನಿತಾ ಇತರರಿದ್ದರು.