ಗಜೇಂದ್ರಗಡ: ಹತ್ತಿ ಗಿಡದ ಎಲೆಗಳಿಗೆ ಕೆಂಪು ರೋಗ ತಗುಲಿದ್ದು, ಎಲೆಗಳು ಉದುರುತ್ತಿವೆ. ಹೀಗಾಗಿ, ತಾಲೂಕಿನ ಬಹುತೇಕ ಹತ್ತಿ ಬೆಳೆಗಾರರು ಆತಂಕಗೊಂಡಿದ್ದಾರೆ.
ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿದ್ದು, ತಾಲೂಕಿನ ಕಡಿಮೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಬೋರ್ವೆಲ್ ಇರುವ ರೈತರು ಮಾತ್ರ ಸಾವಿರಾರು ರೂಪಾಯಿ ಖರ್ಚು ಮಾಡಿ ಹತ್ತಿ ಬೀಜದ ಬಿತ್ತನೆ ಮಾಡಿದ್ದರು. ಲಾಭದ ನೀರಿಕ್ಷೆಯಲ್ಲಿದ್ದ ರೈತರಿಗೆ ಕೆಂಪು (ತಾಮ್ರ) ರೋಗ ನಿರಾಸೆ ಮೂಡಿಸಿದೆ. ಹಸಿರಿನಿಂದ ನಳನಳಿಸಬೇಕಿದ್ದ ಹತ್ತಿ ಗಿಡಗಳು ರೋಗಕ್ಕೆ ಸಿಲುಕಿ ಸೊರಗಿವೆ. ಚಿಕ್ಕ ಗಾತ್ರದ ಕಾಯಿಗಳೇ ಹೆಚ್ಚಾಗಿ ರೋಗಕ್ಕೆ ಸಿಲುಕಿವೆ. ಔಷಧ ಸಿಂಪಡಣೆಗೂ ಮೊದಲೇ ಕಾಯಿಗಳು ಒಡೆಯುತ್ತಿವೆ. ಆಯಾ ಬೀಜ ಕಂಪನಿಗಳ ಸಲಹೆಯಂತೆ ಹತ್ತಿ ಬೆಳೆಗೆ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಆದರೂ ರೋಗ ಹತೋಟಿಗೆ ಬಂದಿಲ್ಲ.