ವಿರಾಜಪೇಟೆ: ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಮೈತಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸ್ವೆಟರ್ ಹಾಗೂ ನಿತ್ಯ ಬಳಕೆಯ ಸಾಮಗ್ರಿಯನ್ನು ಉಚಿತವಾಗಿ ವಿತರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎನ್.ಎನ್.ಶಿವು ಮಾತನಾಡಿ, ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಜನಪರ ಕಾಳಜಿ ಹೊಂದಿದೆ. ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಗೌರವ ಅಧ್ಯಕ್ಷ ತೋರೆರ ಕುಟ್ಟಪ್ಪ ಮಾತನಾಡಿ, ಆಟೋ ಚಾಲಕರ ಸಂಘ ಸಮಾಜ ಸೇವೆಯಲ್ಲಿ ತೊಡಗಿದ್ದು, ಸಂಘದ ಸದಸ್ಯರು ರಕ್ತದಾನ ಮಾಡುತ್ತಿರುವುದು ವಿಶೇಷವಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಗೌರಿಗಣೇಶೋತ್ಸವದ ವಿಸರ್ಜನೆ ಅಂಗವಾಗಿ ಸೆ.9 ರಂದು ಸಂಜೆ ಕಾರು ನಿಲ್ದಾಣದ ವೇದಿಕೆಯಲ್ಲಿ ಸಂಗೀತ ರಸಸಂಜೆ ಹಮ್ಮಿಕೊಳ್ಳಲಾಗಿದೆ ಎಂದರು.
ಉಪಾಧ್ಯಕ್ಷ ಅರ್ಜುನ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ದೀಪು, ಶಾಲಾ ಮುಖ್ಯ ಶಿಕ್ಷಕಿ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.