ಕಾರವಾರ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲು ಬಾಯಿ ಲಸಿಕಾ ಅಭಿಯಾನಕ್ಕೆ ಸೋಮವಾರದಿಂದ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ಏಪ್ರಿಲ್ 30 ರವರೆಗೆ ೫ನೇ ಸುತ್ತಿನ ಲಸಿಕಾಕರಣ ನಡೆಯಲಿದ್ದು, 4-5 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಅವುಗಳಿದ್ದ ಸ್ಥಳಕ್ಕೇ ತೆರಳಿ ಉಚಿತವಾಗಿ ಲಸಿಕೆ ನೀಡಲಾಗುವುದು.
ಪತ್ರಿ 50-80 ಜಾನುವಾರುಗಳಿಗೆ ಒಂದು ಬ್ಲಾಕ್ ರಚಿಸಲಾಗಿದೆ. ಜಿಲ್ಲೆಯ 1289 ಗ್ರಾಮಗಳಲ್ಲಿ ಲಸಿಕೆ ನೀಡಲು 4957 ಬ್ಲಾಕ್ಗಳನ್ನು ರಚಿಸಲಾಗಿದ್ದು, 233 ಲಸಿಕೆದಾರರ ಮೂಲಕ ಪ್ರತಿ ಜಾನುವಾರುಗಳಿಗೆ ಪ್ರತ್ಯೇಕ ಸಿರಿಂಜ್ ಬಳಸಿ ಇಂಜಕ್ಷನ್ ನೀಡಲಾಗುತ್ತಿದೆ.
ಚಾಲನೆ: ಈ ಅಭಿಯಾನಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಿದರು. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಕೆ.ಎಂ. ಮೋಹನಕುಮಾರ, ಎಡಿಸಿ ಪ್ರಕಾಶ ರಜಪೂತ, ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್, ಪೌರಾಯುಕ್ತ ರವಿಕುಮಾರ್, ಪಶುವೈದ್ಯಾಧಿಕಾರಿ ಡಾ. ಪ್ರಶಾಂತ ಕುಮಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಇಇ ಭಾಸ್ಕರ್ ಗೌಡ ಇದ್ದರು.
ಇದನ್ನೂ ಓದಿ: ನೌಕಾನೆಲೆಯ ಮತಗಟ್ಟೆ ಸ್ಥಗಿತ: ಏಕೆ ಗೊತ್ತಾ..?