ಬೆಳಗಾವಿ: ಇಲ್ಲಿನ ಶಾಹು ನಗರದಲ್ಲಿರುವ ಅಗರಬತ್ತಿ ಮತ್ತು ಸೊಳ್ಳೆ ಬತ್ತಿ ತಯಾರಿಕಾ ಘಟಕದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವಲ್ಲಿ ನಿರಂತರ ಮೂರು ಗಂಟೆಗಳ ಕಾಲ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಇಲ್ಲಿನ ಕಂಗ್ರಾಳಿ ರಸ್ತೆಯ ಬಹುಮಹಡಿ ಕಟ್ಟಡದ ಮೂರನೇ ಮಹಡಿಯಲ್ಲಿ ಸಿದ್ದಾರ್ಥ ಮರೇದ ಅವರು ನಡೆಸುತ್ತಿದ್ದ ಸ್ಫೂರ್ತಿ ಹರ್ಬಲ್ ಹೆಸರಿನ ಅಗರಬತ್ತಿ ತಯಾರಿಕೆ ಘಟಕದಲ್ಲಿ ಭಾನುವಾರ ಮಧ್ಯರಾತ್ರಿ ರಾತ್ರಿ 12ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ, ಕ್ಷಣಾರ್ಧದಲ್ಲಿಯೇ ಇಡೀ ಕಟ್ಟಡಕ್ಕೆ ವ್ಯಾಪಿಸಿ, ಸೊಳ್ಳೆ ಬತ್ತಿ ಮತ್ತು ಅಗರಬತ್ತಿ ತಯಾರಿಸುವ ಕಚ್ಚಾ ವಸ್ತುಗಳೆಲ್ಲ ಸುಟ್ಟು ಅಪಾರ ಪ್ರಮಾಣದಲ್ಲಿ ಹೊಗೆ ಆವರಿಸಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ವಾಹನಗಳ ಸಮೇತ ಸ್ಥಳಕ್ಕಾಮಿಸಿದ ಸಿಬ್ಬಂದಿ ಬೆಳಗಿನ ಜಾವ 3.40ರ ವರೆಗೂ ಕಾರ್ಯಾಚರಣೆ ನಡೆಸಿತು. ಈ ವೇಳೆ ಮೂರನೇ ಅಂತಸ್ತಿನ ಮಧ್ಯಭಾಗದಲ್ಲಿ ಸಿಲುಕಿದ್ದ ಪುನಿತ್ ಕೆ.ಆರ್., ಎಂಬುವವರನ್ನು ರಕ್ಷಿಸಿದ್ದಾರೆ. ಊದುಬತ್ತಿ ತಯಾರಿಕೆಗೆ ಬಳಸುತ್ತಿದ್ದ 2.80 ಲಕ್ಷ ರೂ.ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ವಿ.ಎಸ್.ಠಕ್ಕೇಕರ್ ಹಾಗೂ ಸಹಾಯಕ ಠಾಣಾಧಿಕಾರಿ ಸಿ.ಡಿ.ಮಾನೆ ಸೇರಿದಂತೆ ಒಟ್ಟು 12 ಸಿಬ್ಬಂದಿ ಪಾಲ್ಗೊಂಡಿದ್ದರು. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.