ಬೆಂಗಳೂರು: ಪಂಜಾಬ್ ಕಿಂಗ್ಸ್ ತಂಡ 177 ರನ್ ಸವಾಲಿಗೆ ಪ್ರತಿಯಾಗಿ ಆರ್ಸಿಬಿ ತಂಡ ಪ್ರಮುಖ ವಿದೇಶಿ ಆಟಗಾರರಾದ ನಾಯಕ ಫಾಫ್ ಡು ಪ್ಲೆಸಿಸ್ (3), ಕ್ಯಾಮರಾನ್ ಗ್ರೀನ್ (3) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (3) ವಿಕೆಟ್ಗಳನ್ನು ಅಗ್ಗಕ್ಕೆ ಕಳೆದುಕೊಂಡಿತು. ಆದರೂ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (77 ರನ್, 49 ಎಸೆತ, 11 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟದಿಂದ ದಿಟ್ಟ ಚೇಸಿಂಗ್ನತ್ತ ತಂಡವನ್ನು ಮುನ್ನಡೆಸಿದರು. ಆದರೆ 16ನೇ ಓವರ್ನ ಕೊನೇ ಎಸೆತದಲ್ಲಿ ಕೊಹ್ಲಿ ಔಟಾದರು. ಆಗ ಕೊನೇ 4 ಓವರ್ಗಳಲ್ಲಿ 47 ರನ್ ಗಳಿಸುವ ಸವಾಲು ಇತ್ತು. ಕೊಹ್ಲಿ ಔಟಾದ ಆ ಹಂತದಲ್ಲೂ ನಮಗೆ ಸೋಲಿನ ಭಯ ಕಾಡಿರಲಿಲ್ಲ. ಯಾಕೆಂದರೆ ಇಂಪ್ಯಾಕ್ಟ್ ಪ್ಲೇಯರ್ ಮಹಿಪಾಲ್ ಲೊಮ್ರೊರ್ ಮೇಲೆ ನಂಬಿಕೆ ಇತ್ತು. ಜತೆಗೆ ದಿನೇಶ್ ಕಾರ್ತಿಕ್ ಅನುಭವದ ಬಲವಿತ್ತು. ಹೀಗಾಗಿ ಕೊನೇ ಓವರ್ನಲ್ಲಿ 15 ರನ್ ಬೇಕಿದ್ದರೂ ಗಳಿಸುವ ವಿಶ್ವಾಸವಿತ್ತು ಎಂದು ಆರ್ಸಿಬಿ ನಾಯಕ ಪ್ಲೆಸಿಸ್ 4 ವಿಕೆಟ್ ಗೆಲುವಿನ ಬಳಿಕ ಹೇಳಿದರು.
ದಿನೇಶ್ ಕಾರ್ತಿಕ್ (28*) ಮತ್ತು ಮಹಿಪಾಲ್ ಲೊಮ್ರೊರ್ (17*) ಜೋಡಿ ಮುರಿಯದ 7ನೇ ವಿಕೆಟ್ಗೆ 18 ಎಸೆತಗಳಲ್ಲೇ 48 ರನ್ ಸಿಡಿಸಿ 4 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿತು. ಕೊನೇ ಓವರ್ನಲ್ಲಿ 10 ರನ್ ಬೇಕಿದ್ದಾಗ ಕಾರ್ತಿಕ್, ಅರ್ಷದೀಪ್ರ ಮೊದಲ 2 ಎಸೆತಗಳಲ್ಲೇ ಸಿಕ್ಸರ್-ಬೌಂಡರಿ ಸಿಡಿಸಿ ಗೆಲ್ಲಿಸಿದರು.
2 ತಿಂಗಳ ಬಿಡುವಿನ ಬಳಿಕ ಟೂರ್ನಿಯಲ್ಲಿ ಮರಳಿ ಕಣಕ್ಕಿಳಿದಿರುವ ಕೊಹ್ಲಿ ಆಟ ಮಾತ್ರ ಬದಲಾಗಿಲ್ಲ. ವಿರಾಮದಿಂದ ಅವರಿಗೆ ಲಾಭವೇ ಆದಂತಿದೆ ಎಂದು ಪ್ಲೆಸಿಸ್, ಪಂದ್ಯಶ್ರೇಷ್ಠ ಹಾಗೂ ಮಾಜಿ ನಾಯಕನನ್ನೂ ಹೊಗಳಿದರು.
ಕೊಹ್ಲಿ ಕ್ಯಾಚ್ ಬಿಟ್ಟಿದ್ದಕ್ಕೆ ಬೆಲೆ ತೆತ್ತೆವು
ಆರ್ಸಿಬಿ ಇನಿಂಗ್ಸ್ನ 2ನೇ ಎಸೆತದಲ್ಲೇ ಕೊಹ್ಲಿ ಅವರ ಕ್ಯಾಚ್ಅನ್ನು ಸ್ಲಿಪ್ನಲ್ಲಿ ಜಾನಿ ಬೇರ್ಸ್ಟೋ ಕೈಚೆಲ್ಲಿದರು. ಆಗಿನ್ನೂ ಕೊಹ್ಲಿ ಖಾತೆಯನ್ನೂ ತೆರೆದಿರಲಿಲ್ಲ. ಆ ಕ್ಯಾಚ್ ಕೈಚೆಲ್ಲಿದ್ದಕ್ಕೆ ನಾವು ಸೋಲಿನ ಬೆಲೆ ತೆರಬೇಕಾಯಿತು ಎಂದು ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಬೇಸರಿಸಿದರು. “ಆರಂಭಿಕ 6 ಓವರ್ಗಳಲ್ಲಿ ಹೆಚ್ಚಿನ ರನ್ ಗಳಿಸಲಿಲ್ಲ. ಇದರಿಂದ 10-15 ರನ್ ಕೊರತೆ ಅನುಭವಿಸಿದೆವು. ಪಂದ್ಯದ ಕೊನೆಯಲ್ಲಿ ನಾವು ಇನ್ನೂ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು’ ಎಂದು ಧವನ್ ಹೇಳಿದರು.
IPL 2024: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ಗೆ ಸತತ 2ನೇ ಜಯ; ಎಡವಿದ ಗುಜರಾತ್ ಟೈಟಾನ್ಸ್