ವಿಜಯವಾಣಿ ಸುದ್ದಿಜಾಲ ಹಾವೇರಿ
4 ದಶಕಗಳ ಹಿಂದೆ ಅನೇಕ ಸಚಿವರು ಹಾಗೂ ಗಣ್ಯಮಾನ್ಯರಿಗೆ ಎಸ್ಕಾರ್ಟ್ ಕೊಡುತ್ತಿದ್ದ ವ್ಯಕ್ತಿಯೊಬ್ಬರು ಈಗ ತಾವೇ ಎಸ್ಕಾರ್ಟ್ ಸೌಲಭ್ಯ ಪಡೆದುಕೊಳ್ಳಲಿದ್ದಾರೆ!
ಕಾಲ ಹೇಗೆ ಬದಲಾಗುತ್ತದೆ… ಇದಕ್ಕೆ ಬಿ.ಸಿ. ಪಾಟೀಲ ನಿದರ್ಶನ.
ಫೆ. 6ರಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಸಿ. ಪಾಟೀಲ ಅವರಿಗೆ ಈಗ ಅರಣ್ಯ ಖಾತೆ ದೊರೆತಿದೆ. ತಮ್ಮ 23 ವರ್ಷಗಳ ಪೊಲೀಸ್ ಸೇವಾ ಅವಧಿಯಲ್ಲಿ ರಾಜ್ಯದ ಅನೇಕ ಸಚಿವರು, ವಿಐಪಿ, ವಿವಿಐಪಿಗಳಿಗೆ ಎಸ್ಕಾರ್ಟ್ ಒದಗಿಸಿದ್ದ ಬಿ.ಸಿ. ಪಾಟೀಲಗೆ ಈಗ ಸರ್ಕಾರದಿಂದ ಎಸ್ಕಾರ್ಟ್ ಸೌಲಭ್ಯ ಒದಗಿಸಲಾಗಿದೆ.
1979ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಬಿ.ಸಿ. ಪಾಟೀಲರು, ಮೈಸೂರ ಹಾಗೂ ತುಮಕೂರಿನಲ್ಲಿ 1 ವರ್ಷ ಪೊಲೀಸ್ ತರಬೇತಿ ಪಡೆದು 1980ರಲ್ಲಿ ಬಳ್ಳಾರಿ ಜಿಲ್ಲೆ ಕುರುಗೋಡ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಸೇವೆ ಆರಂಭಿಸಿದ್ದರು. ನಂತರ ದಾವಣಗೆರೆ, ಹಿರಿಯೂರನಲ್ಲಿ ಟ್ರಾಫಿಕ್ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದಾರೆ. ಸಿಪಿಐ ಆಗಿ ಬಡ್ತಿ ಪಡೆದು ಬೆಂಗಳೂರು ಗುಪ್ತಚರ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದರು. 1995ರಲ್ಲಿ ಯಶವಂತಪುರ ಠಾಣೆಯ ಸಿಪಿಐ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಸೆಕ್ಯೂರಿಟಿ ಸಿಪಿಐ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಸ್ವಯಂ ನಿವೃತ್ತಿ ಪಡೆದರು.
ಪೊಲೀಸ್ ಅಧಿಕಾರಿಯಾಗಿದ್ದಾಗ ಸೆಲ್ಯೂಟ್ ಮಾಡುತ್ತಿದ್ದ ಬಿಸಿಪಿ ಅವರಿಗೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳೂ ಸೆಲ್ಯೂಟ್ ಮಾಡಲಿದ್ದಾರೆ.
ಕಾಲಚಕ್ರದಡಿ ಆಗುವ ಬದಲಾವಣೆಗೆ ಇದೊಂದು ಅಪರೂಪದ ನಿದರ್ಶವಾಗಿದೆ.
ಕೌರವನಿಗೆ ಸಿಗದ ಗೃಹ ಖಾತೆ: ಬಿ.ಸಿ. ಪಾಟೀಲರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದರಿಂದ ಗೃಹ ಖಾತೆಯ ಮೇಲೆಯೇ ಕಣ್ಣಿಟ್ಟಿದ್ದರು. ಅದು ಸಿಗದೇ ಇದ್ದಲ್ಲಿ, ಲೋಕೋಪಯೋಗಿ, ಇಂಧನ ಇಲ್ಲವೆ ಕೃಷಿ ಖಾತೆಯನ್ನು ಪಡೆಯಲು ಉತ್ಸುಕರಾಗಿದ್ದರು. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಸಿಪಿಗೆ ಅರಣ್ಯ ಖಾತೆ ಹಂಚಿಕೆ ಮಾಡಿದ್ದಾರೆ. ಅರಣ್ಯದಲ್ಲಿ ಬಿ.ಸಿ.ಪಿ. ಕಾಡುಗಳ್ಳರನ್ನು ಹಿಡಿಯಬೇಕಿದೆ. ಹುಲಿ, ಸಿಂಹ ರಕ್ಷಿಸಬೇಕಿದೆ!