ಕ್ಯಾಲಿಫೋರ್ನಿಯಾ: ಜಗತ್ತಿನ ನಂಬರ್ 1 ಶ್ರೀಮಂತ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯ ಮಾಲೀಕತ್ವವನ್ನು ವಹಿಸಿಕೊಳ್ಳುತ್ತಿದ್ದಂತೆ ಟ್ವಿಟರ್ನ ಉನ್ನತ ಅಧಿಕಾರಿಗಳನ್ನು ವಜಾ ಮಾಡಿರುವುದಾಗಿ ಶುಕ್ರವಾರ ವರದಿಯಾಗಿದೆ. ಟ್ವಿಟರ್ ಖರೀದಿಯ ಒಪ್ಪಂದವನ್ನು ಶುಕ್ರವಾರ ಅಂತಿಮಗೊಳಿಸುತ್ತಿದ್ದಂತೆಯೇ ಎಲಾನ್ ಮಸ್ಕ್ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಮೂಲದವರಾದ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಹಾಗೂ ನೀತಿ ನಿರೂಪಣೆಯ ಮುಖ್ಯಸ್ಥ ವಿಜಯ್ ಗದ್ದೆ ಅವರನ್ನು ಎಲಾನ್ ಮಸ್ಕ್ ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಾಲ್ ಸೇರಿದಂತೆ ಕೆಲ ಉನ್ನತ ಅಧಿಕಾರಿಗಳನ್ನು ಸಹ ಟ್ವಿಟರ್ ಕಂಪನಿಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ.
ಕೆಲಸದಿಂದ ವಜಾಗೊಳಿಸಲು ಕಾರಣವನ್ನೂ ನೀಡಿರುವ ಎಲಾನ್ ಮಸ್ಕ್, ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ವಿಟರ್ನಲ್ಲಿನ ನಕಲಿ ಖಾತೆಗಳ ಸಂಖ್ಯೆಯ ವಿಚಾರದಲ್ಲಿ ನನ್ನ ಮತ್ತು ಟ್ವಿಟರ್ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ನಾನು ಪ್ರೀತಿಸುವ ಮಾನವೀಯತೆಗಾಗಿ ಹೆಚ್ಚು ಸಹಾಯ ಮಾಡಲು ನಾನು ಟ್ವಿಟರ್ ಖರೀದಿ ಮಾಡುತ್ತಿದ್ದೇನೆ ಎಂದು ಗುರುವಾರ ಮಸ್ಕ್ ಹೇಳಿದರು. ನಿನ್ನೆ ಖರೀದಿ ಒಪ್ಪಂದ ಅಂತಿಮವಾಗುವಾಗ ಸ್ಯಾನ್ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ನ ಮುಖ್ಯ ಕಚೇರಿಯಲ್ಲಿ ನೆಡ್ ಸೆಹಗಲ್ ಮತ್ತು ಪರಾಗ್ ಅಗರ್ವಾಲ್ ಸಹ ಇದ್ದರು. ಖರೀದಿ ಒಪ್ಪಂದ ಅಂತಿಮಗೊಳಿಸುವ ಒಂದು ದಿನದ ಮುಂಚೆ ಕಚೇರಿಗೆ ಭೇಟಿ ನೀಡಿದ್ದ ಮಸ್ಕ್, ತಮ್ಮ ಟ್ವಿಟರ್ ಬಯೋದಲ್ಲಿ ಟ್ವಿಟರ್ನ ಮುಖ್ಯಸ್ಥ (Chief Twit) ಎಂದು ಬದಲಾಯಿಸಿಕೊಂಡಿದ್ದರು.
ಕಳೆದ ಏಪ್ರಿಲ್ನಲ್ಲಿ ಟ್ವಿಟರ್ ಖರೀದಿಸುವ 44 ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಆರಂಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು ಮತ್ತು ಮಾಹಿತಿ ಪಡೆಯಲು ಟ್ವಿಟರ್ಗೆ ತಿಳಿಸಿದ್ದರು. ಆದರೆ, ಟ್ವಿಟರ್ ಸಹಕಾರ ನೀಡುತ್ತಿಲ್ಲ ಎಂದು ಅವರ ವಕೀಲರು ಆರೋಪಿಸಿದ್ದರು. ಇದರಿಂದಾಗಿ ದಿಢೀರನೇ ತಮ್ಮ ನಿಲುವು ಬದಲಿಸಿಕೊಂಡಿದ್ದ ಮಸ್ಕ್, ಟ್ವಿಟರ್ ಖರೀದಿ ಒಪ್ಪಂದವನ್ನು ಮುರಿದುಕೊಂಡಿದ್ದರು. ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರೂ ಮಾಹಿತಿ ನೀಡದ್ದಕ್ಕೆ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಮಸ್ಕ್ ಸ್ಪಷ್ಟನೆ ನೀಡಿದ್ದರು. ಕಂಪನಿಯನ್ನು ಖರೀದಿಸಲು ಕಾನೂನುಬದ್ಧವಾಗಿ ಮಸ್ಕ್ ಬದ್ಧರಾಗಿದ್ದಾರೆ ಮತ್ತು ಮೊಕದ್ದಮೆ ಹೂಡಿದ್ದಾರೆ ಎಂದು ಟ್ವಿಟರ್ ವಾದಿಸಿತು.
ಅಕ್ಟೋಬರ್ ಆರಂಭದಲ್ಲಿ ಟ್ವಿಟರ್ನ ವಕೀಲರು ತಮ್ಮ ವಿಚಾರಣೆಯ ಪ್ರಾರಂಭದ ಮೊದಲು ಮಸ್ಕ್ ಅವರನ್ನು ಪದಚ್ಯುತಗೊಳಿಸಲು ನಿರ್ಧರಿಸಿದಾಗ, ಮಸ್ಕ್ ಮತ್ತೊಮ್ಮೆ ಯು-ಟರ್ನ್ ಹೊಡೆಯುವ ಮೂಲಕ ಒಪ್ಪಂದವನ್ನು ಪೂರ್ಣಗೊಳಿಸಲು ಮುಂದಾದರು. ಅದರಂತೆ ಶುಕ್ರವಾರ ಖರೀದಿ ಒಪ್ಪಂದವನ್ನು ಪೂರ್ಣಗೊಳಿಸಿರುವ ಮಸ್ಕ್, ಟ್ವಿಟರ್ನ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್)
ಪೊಲೀಸರೇ ತೆರಬೇಕು ಕಪ್ಪ!; ಗುಮಾಸ್ತರಿಗೆ ಲಂಚ ನೀಡದೆ ಕೆಲಸವಾಗದು, ವರ್ಗಾವಣೆ ನಿಯಮ ಇವರಿಗಿಲ್ಲ ಅನ್ವಯ
ಪಿಒಕೆ ವಶ ರಾಜನಾಥ್ ಸಿಂಗ್ ಸುಳಿವು; ಕಾಶ್ಮೀರದ ಮಾನವ ಹಕ್ಕು ಹೋರಾಟಗಾರರು, ಬುದ್ಧಿಜೀವಿಗಳಿಗೆ ತರಾಟೆ