ಕೊಯಮತ್ತೂರು: ಕಾಡು ಮೇಡು ಎಂದು ನೋಡದೆ, ಎಲ್ಲೆಲ್ಲೂ ರಸ್ತೆಗಳನ್ನು ನಿರ್ಮಿಸಿ, ಜನವಸತಿ ಪ್ರದೇಶಗಳನ್ನು ಮಾಡಿಕೊಳ್ಳುವ ಮನುಷ್ಯರ ಬಗ್ಗೆ ಪ್ರಾಣಿಗಳಿಗೆ ಕೋಪ ಇರಲೇಬೇಕು. ಯಾಕಂತೀರಾ? ಈ ರೀತಿಯಾಗಿ, ‘ಎಲ್ಲೆಲ್ಲೂ ನೀವೇ ಓಡಾಡ್ತಿದ್ರೆ ಹೇಗೆ?” ಎಂದು ಅವಾಜ್ ಹಾಕುವಂತೆ, ಗಂಡಾನೆಯೊಂದು ಸಾರಿಗೆ ಬಸ್ಸಿಗೆ ಅಡ್ಡ ಹಾಕಿ ಜನರಿಗೆ ಯಾತನೆ ನೀಡಿರುವ ಪ್ರಸಂಗ ನಡೆದಿದೆ.
ಅರಣ್ಯ ವಲಯದಲ್ಲಿ ಹೋಗುತ್ತಿದ್ದ ಬಸ್ಸಿಗೆ ಒಂಟಿ ಸಲಗವೊಂದು ಅಡ್ಡ ಬಂದು, ನಡುರಸ್ತೆಯಲ್ಲಿ ನಿಂತುಕೊಂಡು ಪುಂಡಾಟ ನಡೆಸಿದ್ದು, ಅರ್ಧ ಗಂಟೆ ಬಸ್ ಮುಂದೆ ಹೋಗದಂತೆ ಮಾಡಿದೆ. ತಮಿಳುನಾಡಿನ ಕೊಯಮತ್ತೂರಿನ ಉದಕಮಂಡಲದ ಬಳಿ ನಿನ್ನೆ ಈ ಘಟನೆ ನಡೆದಿದ್ದು, ತಮಿಳುನಾಡು ಸಾರಿಗೆ ಸಂಸ್ಥೆ ವಾಹನದಲ್ಲಿದ್ದ ಪ್ರಯಾಣಿಕರು ಜೀವಭಯದ ರುಚಿ ಉಂಡಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಪದವೀಧರರಿಗೆ ಉದ್ಯೋಗ- 103 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊಯಮತ್ತೂರಿನಿಂದ ಊಟಿ ಕಡೆ ಹೊರಟಿದ್ದ ಬಸ್ಸಿಗೆ ದಿಢೀರಾಗಿ ಸಲಗ ಅಡ್ಡ ಬಂದಿದೆ. ಚಾಲಕ ಹಿಂದಕ್ಕೆ ತೆಗೆದುಕೊಂಡು ಪಕ್ಕದಿಂದ ಹೋಗುವುದಕ್ಕೆ ಪ್ರಯತ್ನಿಸಿದರೂ ದಾರಿ ಕೊಡದೆ, ಮತ್ತೆ ಅಡ್ಡಕ್ಕೆ ನಿಂತಿದೆ. ಮುಂದಕ್ಕೆ ಚಲಿಸದೆ ಸುಮ್ಮನಾದರೂ ವ್ಯಾಘ್ರಗೊಂಡ ಸಲಗ, ತನ್ನ ದಂತಗಳಿಂದ ಬಸ್ಸಿನ ಮುಂಭಾಗದ ಗಾಜನ್ನು ಒಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಈ ಒಂಟಿ ಸಲಗದ ಪುಂಡಾಟಕ್ಕೆ ಬೆಚ್ಚಿದರೆ, ಬಸ್ಸಿನಷ್ಟೂ ಎತ್ತರವಿದ್ದ ಸಲಗದ ನೇರ ದೃಷ್ಟಿಗೆ ಹೆದರಿದ ಡ್ರೈವರ್ ತನ್ನ ಸೀಟಿನಿಂದ ಎದ್ದು, ಬಸ್ಸಿನ ನಡುಭಾಗಕ್ಕೆ ಹೋಗಿ ನಿಂತಿದ್ದಾನೆ.
ಈ ರೀತಿಯಾಗಿ ಸುಮಾರು ಅರ್ಧ ತಾಸು ಬಸ್ಸನ್ನು ಮುಂದಕ್ಕೆ ಬಿಡದೆ ಆಟಾಡಿಸಿದ ಈ ಸಲಗ, ನಂತರ ಕಾಡಿನತ್ತ ಹೆಜ್ಜೆ ಹಾಕಿದೆ. ಈ ಬೃಹದಾಕಾರದ ಪ್ರಾಣಿಯು ಬಸ್ಸಿನಿಂದ ದೂರಕ್ಕೆ ಹೋಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್ ಗೇಟ್ಸ್ ಪ್ರಶಂಸೆ