ಬೆಂಗಳೂರು: ನಟ ಯಶ್, ‘ಕೆಜಿಎಫ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವುದು ಗೊತ್ತಿರುವ ವಿಚಾರ. ಇದೀಗ ‘ಕೆಜಿಎಫ್ ಚಾಪ್ಟರ್ 2’ ಸಲುವಾಗಿ ಇಡೀ ದೇಶವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಹೀಗಿರುವಾಗಲೇ, ಟಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಸದ್ಯ ‘ರಾಧೆ’ ಚಿತ್ರದ ‘ಸೀಟಿ ಮಾರ್ …’ ಹಾಡಿನ ಮೂಲಕ ಸದ್ದು ಮಾಡುತ್ತಿರುವ ದೇವಿ ಶ್ರೀಪ್ರಸಾದ್ ಅಲಿಯಾಸ್ ಡಿಎಸ್ಪಿ, ಯಶ್ ಬಗ್ಗೆ ಮಾತನಾಡಿದ್ದಾರೆ. ‘ಕಳೆದ ಕೆಲ ವರ್ಷಗಳ ಹಿಂದೆ ದುಬೈಗೆ ಹೋಗಿದ್ದಾಗ, ಓರ್ವ ವ್ಯಕ್ತಿ ಬಂದು, ‘ಸರ್ ನಾನು ನಿಮ್ಮ ಅಭಿಮಾನಿ. ನಿಮ್ಮ ಹಾಡುಗಳನ್ನು ತುಂಬ ಕೇಳಿದ್ದೇನೆ. ನನ್ನ ಹೆಸರು ಯಶ್’ ಎಂದು ಪರಿಚಯ ಮಾಡಿಕೊಂಡಿದ್ದರು. ಆದರೆ, ನನಗೆ ಆಗ ಅಷ್ಟಾಗಿ ಅವರ ಪರಿಚಯ ಇರಲಿಲ್ಲ. ಆದರೆ, ಅವರ ಮಾತಿನಲ್ಲಿನ ಸಿಂಪ್ಲಿಸಿಟಿ, ಮಾತಿನ ಶೈಲಿ ಇಷ್ಟವಾಗಿತ್ತು. ಇಷ್ಟೆಲ್ಲ ಆದ ಮೇಲೆ ‘ಕೆಜಿಎಫ್’ ರಿಲೀಸ್ ಆಯ್ತು. ನನ್ನನ್ನು ಮಾತನಾಡಿಸಿ, ಪರಿಚಯ ಮಾಡಿಕೊಂಡಿದ್ದು ಇವರೇನಾ ಎಂದು ನನಗೇ ಅಚ್ಚರಿಯಾಗಿತ್ತು. ಹೀಗಿರುವಾಗಲೇ ವಿದೇಶದಲ್ಲಿನ ಅವಾರ್ಡ್ ಕಾರ್ಯಕ್ರಮದಲ್ಲಿಯೂ ಯಶ್ ಸಿಕ್ಕರು. ಅಲ್ಲಿಯೂ ಸಹ ‘ಸರ್, ನಾನು ಯಶ್ …’ ಎಂದು ಮತ್ತೆ ಹೇಳಿದರು.
ಆಗ ನನಗನಿಸಿದ್ದು, ಇಷ್ಟು ದೊಡ್ಡ ಫೇಮ್ ಸಿಕ್ಕ ಮೇಲೂ ಈ ವ್ಯಕ್ತಿ ಚೂರೂ ಬದಲಾಗಿಲ್ಲ ಎಂದು. ಮೊದಲ ಭೇಟಿಯ ವೇಳೆ ಹೇಗೆ ಮಾತನಾಡಿಸಿದ್ದರೋ ಅದೇ ರೀತಿ ಎರಡನೇ ಭೇಟಿಯಲ್ಲಿ ಮಾತುಕತೆಯಾಗಿತ್ತು. ನಿಜಕ್ಕೂ ಬದಲಾಗದ ವ್ಯಕ್ತಿತ್ವ ಅವರದ್ದು’ ಎಂದು ಡಿಎಸ್ಪಿ ಯಶ್ ಗುಣಗಾನ ಮಾಡಿದ್ದಾರೆ. ಇನ್ನು, ‘ಕೆಜಿಎಫ್’ ಬಗ್ಗೆ ಮಾತನಾಡಿರುವ ಡಿಎಸ್ಪಿ, ‘‘ಕೆಜಿಎಫ್’ ಚಿತ್ರತಂಡವೇ ಅದ್ಬುತ. ನಿರ್ದೇಶನ, ಸಂಗೀತ, ಕ್ಯಾಮರಾ, ಆರ್ಟ್ ವರ್ಕ್ … ಎಲ್ಲವೂ ಅಚ್ಚುಕಟ್ಟು ಎಂದು ಹೊಗಳಿದ್ದಾರೆ. ಕನ್ನಡದಲ್ಲಿ 2008ರಲ್ಲಿ ಬಿಡುಗಡೆಯಾದ ಗಣೇಶ್ ಅಭಿನಯದ ‘ಸಂಗಮ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಡಿಎಸ್ಪಿ, ಆ ನಂತರ ಕನ್ನಡದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಮತ್ತೆ ಇನ್ನಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದಕ್ಕೆ ಎದುರು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಪ್ರತಿದಿನ ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ…; ಸೆಲೆಬ್ರಿಟಿ ಕಾರ್ನರ್ನಲ್ಲಿ ನೀನಾಸಂ ಸತೀಶ್