ಗಂಗಾವತಿ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ೋಷಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಸದಸ್ಯರು, ನರೇಗಾ ಕೂಲಿಕಾರರೊಂದಿಗೆ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ ಮತ್ತು ತಾಪಂ ವಿಷಯ ನಿರ್ವಾಹಕ ಭೀಮಣ್ಣಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಎಂ.ಬಸವರಾಜ ಮಾತನಾಡಿ, ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ತುಂಗಭದ್ರಾ ಜಲಾಶಯದಲ್ಲೂ ನೀರಿನ ಸಂಗ್ರಹವಾಗುತ್ತಿಲ್ಲ. ಕೃಷಿಯನ್ನೇ ನಂಬಿರುವ ರೈತರು ಮತ್ತು ಕೂಲಿಕಾರರು ಅತಂತ್ರಕ್ಕೊಳಗಾಗಿದ್ದು, ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಬರಪೀಡಿತ ಪ್ರದೇಶವೆಂದು ೋಷಿಸುವುದರ ಜತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ 150 ಮಾನವ ದಿನಗಳನ್ನು ಸೃಜಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಹುಸೆನಪ್ಪ, ತಾಲೂಕು ಅಧ್ಯಕ್ಷ ಮರಿನಾಗಪ್ಪ ಡಗ್ಗಿ, ಕಾರ್ಯದರ್ಶಿ ದುರುಗೇಶ ಮರಕುಂಬಿ, ಸದಸ್ಯರಾದ ಮಂಜುನಾಥ ಡಗ್ಗಿ, ಶಿವಕುಮಾರ ಈಚನಾಳ್, ನಾಗಮ್ಮ, ಮುದುಕಮ್ಮ, ಹುಲಿಗೆಮ್ಮ ಇತರರಿದ್ದರು.