More

    ಎಚ್‌ಡಿಕೆ ಕಣ್ಣೀರಿಗೆ ಮರುಳಾಗದಿರಿ

    ಕೆ.ಎಂ.ದೊಡ್ಡಿ: ಜೆಡಿಎಸ್-ಬಿಜೆಪಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅನುಕಂಪ ಗಿಟ್ಟಿಸಿಕೊಳ್ಳಲು ಭಾವನಾತ್ಮಕ ಮಾತುಗಳನ್ನು ಆಡಿ ಕಣ್ಣೀರುಡುತ್ತಾರೆ. ಅವರ ಮಾತಿಗೆ ಮರಳಾಗಬೇಡಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

    ಭಾರತೀನಗರ ಹಾಗೂ ಚಿಕ್ಕರಸಿನಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು, ನಿಮಗೆ ಜಿಲ್ಲೆಯ ಮಗ ಬೇಕಾ? ಅಥವಾ ಹೊರಗಿನಿಂದ ಬಂದವರು ಬೇಕಾ? ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೇ ಜಿಲ್ಲೆಗೆ ಏನು ಕೊಡುಗೆ ನೀಡಿಲ್ಲ. ಜಿಲ್ಲೆಗೆ ಬಂದಿದ್ದ ಅನುದಾನವನ್ನು ಹಿಂದಕ್ಕೆ ತೆಗೆದುಕೊಂಡು ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ ಎಂದು ಹರಿಹಾಯ್ದರು.

    ಸಾತನೂರು, ರಾಮನಗರ, ಮಧುಗಿರಿ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮುಗಿಸಿ ಈಗ ಮಂಡ್ಯಕ್ಕೆ ಬಂದಿದ್ದಾರೆ. ಹೋದ ಕಡೆಯಲೆಲ್ಲ ಇದು ನನ್ನ ಕರ್ಮಭೂಮಿ ಎನ್ನುತ್ತಾರೆ. ಚುನಾವಣೆ ನಂತರ ಮತ್ತೆಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. 7 ಕ್ಷೇತ್ರ ಗೆದ್ದು ಮುಖ್ಯಮಂತ್ರಿ ಆಗಿದ್ದರೂ ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆ ಕೊಟ್ಟಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

    ನಾವು ರೈತರ ಮಕ್ಕಳು ಅಂತಾರೆ, ಒಂದು ನಾಲೆಯನ್ನೂ ಅಭಿವೃದ್ಧಿ ಮಾಡಿಲ್ಲ. ಕಾವೇರಿ ವಿಚಾರವಾಗಿ ನ್ಯಾಯ ಕೊಡಿಸಲಿಲ್ಲ. ಜನರನ್ನು ನಂಬಿಸಲು ಕಣ್ಣಿರು ಸುರಿಸುತ್ತಾ ಜನರನ್ನು ಮರಳು ಮಾಡುವ ವಿದ್ಯಾಭ್ಯಾಸ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. ರಾಜ್ಯದ ಯಾವುದೇ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ. ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸುವುದೇ ಇವರ ಜೀವನದ ಉದ್ದೇಶವಾಗಿದ್ದು ಕೃತಜ್ಞತಾ ಮನೋಭಾವ ಇಲ್ಲದ ವ್ಯಕ್ತಿತ್ವ ಎಚ್‌ಡಿಕೆ ಅವರದ್ದು ಎಂದು ಕಿಡಿಕಾರಿದರು.

    ಕೊನೆ ಭಾಗದ ರೈತರ ಸಾವಿರಾರು ಎಕರೆ ಜಮೀನಿಗೆ ನೀರುಣಿಸಲು ಹಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕೂಳಗೆರೆ ಹಾಗೂ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

    ಬಳಿಕ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಮಾತನಾಡಿದರು. ಮಾಜಿ ಸಚಿವ ಬಿ.ಸೋಮಶೇಖರ್, ಜಿಪಂ ಮಾಜಿ ಸದಸ್ಯರಾದ ಬಿ.ಬಸವರಾಜು, ಎ.ಎಸ್.ರಾಜೀವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts