ಧಾರವಾಡ: ಸಂಗೀತವು ಮನುಷ್ಯನ ಮಾನಸಿಕ ಒತ್ತಡವನ್ನು ತಣಿಸುವ ದಿವ್ಯ ಔಷಧವಾಗಿದೆ. ಯಾವುದೇ ರೋಗವನ್ನು ಗುಣಪಡಿಸಬಲ್ಲ ಶಕ್ತಿಯನ್ನು ಸಂಗೀತವು ಹೊಂದಿದೆ. ಕ್ಯಾನ್ಸರ್ ರೋಗಿಗಳ ನೋವುಗಳ ನಿವಾರಕವಾಗಿ ಸಂಗೀತ ಕಾರ್ಯ ಮಾಡುತ್ತದೆ. ಸಂಗೀತದಿಂದ ಸುಖ, ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದು ಮಕ್ಕಳ ವೈದ್ಯ ಡಾ. ರಾಜನ್ ದೇಶಪಾಂಡೆ ಹೇಳಿದರು.
ನಗರದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಗಾನಯೋಗಿ ಪಂ. ಪಂಚಾಕ್ಷರಿ
ಗವಾಯಿಗಳ 129ನೇ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಗೀತ ಕಲಾವಿದೆ ನೀಲಮ್ಮ ಎಂ. ಕೊಡ್ಲಿ ಮಾತನಾಡಿ, ಪಂ. ಪಂಚಾಕ್ಷರಿ ಗವಾಯಿಗಳು ಸಂಗೀತ ಲೋಕಕ್ಕೆ ನೀಡಿದ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ ಮಾತನಾಡಿದರು. ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಅಯ್ಯಪ್ಪಯ್ಯ ಹಲಗಲಿಮಠ ಪ್ರಾರ್ಥಿಸಿದರು. ಡಾ. ಅರ್ಜುನ ವಠಾರ ವಂದಿಸಿದರು. ಡಾ. ಅಮೃತ ಮಡಿವಾಳ ನಿರೂಪಿಸಿದರು.
ನಂತರ ಜರುಗಿದ ಸಂಗೀತೋತ್ಸವದಲ್ಲಿ ಯುವ ಕಲಾವಿದ ನಿಖಿಲ್ ಜೋಶಿ ಸಿತಾರವಾದನದಲ್ಲಿ ರಾಗ ಜನಸಂಮೋಹಿನಿ ಪ್ರಸ್ತುತಪಡಿಸಿದರು. ಬಳಿಕ ಹಿರಿಯ ಗಾಯಕ ಡಾ. ಮೃತ್ಯುಂಜಯ ಅಗಡಿ ಗಾಯನ ಪ್ರಸ್ತುತಪಡಿಸಿದರು. ಪಂ. ವೆಂಕಟೇಶಕುಮಾರ, ಪಂ. ಸೋಮನಾಥ ಮರಡೂರ, ಪಂ. ಬಿ.ಎಸ್. ಮಠ, ಅಕ್ಕಮಹಾದೇವಿ ಮಠ, ಡಾ. ಉದಯಕುಮಾರ ದೇಸಾಯಿ, ಉಸ್ತಾದ್ ಶಫೀಕಖಾನ್, ಡಾ. ದಿಲೀಪ ದೇಶಪಾಂಡೆ, ರಾಘವೇಂದ್ರ ಆಯಿ, ಶ್ರೀನಿವಾಸ ಜೋಶಿ, ನಿಜಗುಣ ರಾಜಗುರು, ಡಾ. ಎಸ್.ಪಿ. ಬಳಿಗಾರ, ಪ್ರೊ. ಶಶಿಧರ ತೋಡಕರ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಕುಮಾರ ಮರಡೂರ, ಡಾ. ಶಿವಾನಂದ ಶೆಟ್ಟರ, ಅನಿಲ ಮೇತ್ರಿ, ಇತರರಿದ್ದರು.