ಕೊಪ್ಪಳ: ಬರುವ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವೇದಿಕೆ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಹಳ್ಳಿ ಹಳ್ಳಿಗಳಲ್ಲಿ ಕೋಮುವಾದ ವಿರುದ್ಧ ಪ್ರಚಾರ ಅಭಿಯಾನ ಕೊಂಡೊಯ್ಯುತ್ತೇವೆ. ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರಲು ಅವಕಾಶವಿದೆ. ಆದರೆ, ಮೂಲ ಆಶಯಗಳಿಗೆ ಧಕ್ಕೆ ತಂದರೆ ಸರ್ವಾಧಿಕಾರ ಜಾರಿಯಾಗಲಿದೆ. ಸಹೋದರತ್ವ, ಸ್ವಾತಂತ್ರ್ಯ ಉಳಿಯಬೇಕು. ಆದರೆ, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇಂಡಿಯಾ ಒಕ್ಕೂಟ ಅದರ ವಿರುದ್ಧ ಹೋರಾಡುತ್ತಿದೆ. ನಾವು ಒಕ್ಕೂಟ ಬೆಂಬಲಿಸುತ್ತೇವೆ. ಜಾತಿ, ಧರ್ಮ ಆಧಾರದಲ್ಲಿ ಆಡಳಿತ ನಡೆದರೆ ಅನಾಹುತ ಆಗಲಿದೆ. ದೇಶ ಬಂಡವಾಳಶಾಹಿಗಳ ಕೈ ವಶವಾಗಿದೆ. ಕೋಮು ಸೌಹಾರ್ದತೆ ಉಳಿಸಬೇಕು. ರಾಷ್ಟ್ರಾಭಿಮಾನ ಹೆಸರಿನಲ್ಲಿ ಒಂದು ಧರ್ಮದ ಪರವಾಗಿ ಪ್ರಚೋದಿಸುವುದು ಸರಿಯಲ್ಲ ಎಂದರು.
ಡಿ.ಎಚ್.ಪೂಜಾರ ಮಾತನಾಡಿ, ಕ್ಷೇತ್ರಾದ್ಯಂತ ಜನ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಎಡ ಪಕ್ಷಗಳು ಎದ್ದೇಳು ಕರ್ನಾಟಕ ಹೋರಾಟದಲ್ಲಿ ಇರಲಿಲ್ಲ. ಸದ್ಯ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಲ್ಲಿ ಇದ್ದಾರೆ. ಎರಡು ತಿಂಗಳಿಂದ ನಮ್ಮ ಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ. ಕೋಮುವಾದಿಗಳನ್ನು ಸೋಲಿಸುವುದು ನಮ್ಮ ಮುಖ್ಯ ಗುರಿ. ದೇಶ ಅಪಾಯಕಾರಿ ಸ್ಥಿತಿಯಲ್ಲಿದೆ. ಸಾಲ ಹೆಚ್ಚಿದೆ. ಹೀಗಾಗಿ ಬಿಜೆಪಿ ಸೋಲಿಸಬೇಕಿದೆ ಎಂದರು.
ವೇದಿಕೆ ಸಂಚಾಲಕರಾದ ಮುದುಕಪ್ಪ ನರೇಗಲ್, ಬಸವರಾಜ ಶೀಲವಂತರ, ಲಿಂಗರಾಜ ಬೆಣಕಲ್, ಕೆ.ಬಿ.ಗೋನಾಳ ಇದ್ದರು.