ಬಳ್ಳಾರಿ: ಪೊಲೀಸರು ಸಾಮಾನ್ಯವಾಗಿ ಎಲ್ಲ ಮುಗಿದ ಮೇಲೆ ಬರುತ್ತಾರೆ ಹಾಗೂ ಹೆಂಡತಿ ತವರಿಗೆ ಹೋದರೆ ಪುರುಷರು ಸಾಮಾನ್ಯವಾಗಿ ಖುಷಿ ಪಡುತ್ತಾರೆ ಎಂಬ ಎರಡೂ ಮಾತನ್ನು ಸುಳ್ಳಾಗಿಸಿದಂಥ ಪ್ರಕರಣವಿದು. ವಿಶೇಷವೆಂದರೆ ಈ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಥದ್ದೊಂದು ಪ್ರಕರಣ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಮಾ. 23ರಂದು ಈ ಪ್ರಕರಣ ನಡೆದಿದ್ದು, ಇದೀಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಟ್ವೀಟ್ನಿಂದಾಗಿ ಈ ಪ್ರಕರಣ ರಾಜ್ಯದ ಜನರ ಗಮನ ಸೆಳೆದಿದೆ.
ಕಂಪ್ಲಿ ನಿವಾಸಿ ಗಾಳೇಶ್ ಎಂಬ ವ್ಯಕ್ತಿ ತನ್ನ ಆರು ವರ್ಷದ ಪುತ್ರಿಯ ಜೊತೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ತನ್ನೊಂದಿಗೆ ಜಗಳವಾಡಿಕೊಂಡಿದ್ದ ಪತ್ನಿ ಸಿಟ್ಟು ಮಾಡಿಕೊಂಡು ಇಬ್ಬರು ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದಳು. ಆಮೇಲೆ ಎಷ್ಟು ಕರೆದರೂ ವಾಪಸ್ ಬರದ್ದರಿಂದ ತೀವ್ರ ಬೇಸರಕ್ಕೆ ಒಳಗಾದ ಗಾಳೇಶ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ.
ಆದರೆ ಆ ಸಂದರ್ಭದಲ್ಲಿ ನದಿಯ ಪಕ್ಕದಲ್ಲಿ ಇದ್ದ ಜನರು ರಕ್ಷಣೆಗೆ ಧಾವಿಸಿದ್ದು, ಗಾಳೇಶ್ ಅವರೊಂದಿಗೆ ಜಳಗವಾಡಿಕೊಂಡು ನದಿಗೆ ಹಾರುವ ಯತ್ನ ಮುಂದುವರಿಸಿದ್ದ. ಆಗ ಸ್ಥಳೀಯರು 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಳೇಶ್ ಹಾಗೂ ಆತನ ಪುತ್ರಿ ಇಬ್ಬರನ್ನೂ ರಕ್ಷಣೆ ಮಾಡಿದ್ದರು.
ಗಾಳೇಶ್ ಕುಡಿತದ ಚಟಕ್ಕೆ ಬಿದ್ದಿದ್ದರಿಂದ ದಿನವೂ ಜಗಳವಾಗುತ್ತಿದ್ದು, ಅದೇ ಕಾರಣಕ್ಕೆ ಪತ್ನಿ ಬೇಸತ್ತು ತವರಿಗೆ ಸೇರಿಕೊಂಡಿದ್ದಳು. ಆದರೆ ಪೊಲೀಸರು ಗಾಳೇಶ್ನನ್ನು ರಕ್ಷಿಸಿದ್ದಲ್ಲದೆ ಆತನಿಗೆ ಎಚ್ಚರಿಕೆ ನೀಡಿ ಕುಡಿತವನ್ನೂ ಬಿಡಿಸಿದ್ದಾರೆ ಎನ್ನಲಾಗಿದ್ದು, ದಂಪತಿಯನ್ನು ಒಂದುಗೂಡಿಸಿದ್ದಾರೆ. ಕಂಪ್ಲಿ ಪೊಲೀಸರ ಈ ಕಾರ್ಯಕ್ಕೆ ಡಿಜಿಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Well done !! https://t.co/9JrzoNSgdo
— Praveen Sood (@Copsview) May 10, 2022
ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ, ಸುಪ್ರೀಂಕೋರ್ಟ್ನಿಂದಲೇ ಸೂಚನೆ; ದೇಶಾದ್ಯಂತದ ಎಲ್ಲ ಪಾಲಿಕೆಗಳಿಗೂ ಅನ್ವಯ…