ಲಿಂಗದಹಳ್ಳಿ: ಶಾಸಕ ಜಿ.ಎಚ್.ಶ್ರೀನಿವಾಸ್ ಚುನಾವಣೆ ವೇಳೆ ನೀಡಿದ ಭರವಸೆಯಂತೆ ಧೂಪದ ಖಾನ್ ಗ್ರಾಮದಲ್ಲಿ ಬಾಕಿ ಉಳಿದ ರಸ್ತೆ 230 ಮೀಟರ್ ರಸ್ತೆಯನ್ನು ಮುಖ್ಯ ಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎ.ಅಬುಬಕರ್ ಕುಟ್ಟಿ ಹೇಳಿದರು.
ಧೂಪದ ಖಾನ್ ಗ್ರಾಮದಲ್ಲಿ ಸೋಮವಾರ ನಡೆದ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ, ನಂದಿಬಟ್ಟಲು ಗ್ರಾಮ ಪಂಚಾಯಿತಿ ಭದ್ರ ಅಭಯಾರಣ್ಯದ ಹಂಚಿನಲ್ಲಿದ್ದು ತಣಿಗೆಬೈಲು, ನಂದಿಬಟ್ಟಲು, ಹುಣಸೇಬೈಲು, ಸೈದುಖಾನ್, ಮುಂತಾದ ಗ್ರಾಮಗಳು ಸಹ ಅಭಯಾರಣ್ಯದ ಸೆರಗಿನಲ್ಲೇ ಇದ್ದು, ಅತ್ಯಂತ ಕುಗ್ರಾಮಗಳಾಗಿವೆ. ಈ ಗ್ರಾಮಗಳಿಗೆ ಅನೇಕ ಮೂಲ ಸೌಲಭ್ಯಗಳ ಕೊರತೆ ಇದ್ದು, ಆದ್ಯತೆ ಮೇರೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮಾಜ ಸೇವಕಿ ಜಿ.ಎಚ್..ರಚನಾ ಶ್ರೀನಿವಾಸ್ ಮಾತನಾಡಿ, ಲಿಂಗದಹಳ್ಳಿ ಹೋಬಳಿ ಮೊದಲು ಬೀರೂರು ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 15ವರ್ಷಗಳ ಹಿಂದೆ ತರೀಕೆರೆ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆ. ಹಿಂದೆ ಜಿ.ಎಚ್ ಶ್ರೀನಿವಾಸ್ ಶಾಸಕರಾದ ಅವಧಿಯಲ್ಲಿ ತಣಿಗೆಬೈಲು, ಮುಅಳ್ಳಟ್ಟಿ ಬೈಲು ರಸ್ತೆ ಅಭಿವೃದ್ಧಿ ಹಾಗೂ ಹುಣಸೆಬೈಲು ಗ್ರಾಮದಿಂದ ರೂಪ್ಲೈನ್ ವರೆಗಿನ ರಸ್ತೆ ಅಭಿವೃದ್ಧಿ ಪಡಿಸಿದ್ದರು ಎಂದರು.
ಪಿಡಿಒ ಎನ್.ಎಸ್. ನಾಗರಾಜಪ್ಪ, ಗ್ರಾಪಂ ಸದಸ್ಯೆ ಸೌಮ್ಯ ಪುಷ್ಪಾರಾಜ್, ವಾಣಿ ರಾಜೇಶ್, ಎಇಇ. ರವಿಕುಮಾರ್, ಬಗರ್ ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್, ಗುತ್ತಿಗೆದಾರ ಮಂಜುನಾಥ್, ಗ್ರಾಪಂ ಸಿಬ್ಬಂದಿ ವರ್ಗದವರಾದ ಆರ್. ರಾಜೇಶ್, ಎನ್. ರವಿ, ಮುಂತಾದವರು ಹಾಜರಿದ್ದರು.