ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಆರಾಧ್ಯದೈವ ಶ್ರೀಲಕ್ಷ್ಮೀರಂಗನಾಥ ದೇವಸ್ಥಾನ ಕಾಣಿಕೆ ಹುಂಡಿ ಏಣಿಕೆ ಬುಧವಾರ ಮಾಡಲಾಗಿದ್ದು, 28 ಸಾವಿರ ರೂ. ಸಂಗ್ರಹವಾಗಿದೆ.
ಉಪತಹಸೀಲ್ದಾರ್ ವಿಕಾಸ್ಕುಮಾರ ಕೋಳೂರು ಮಾತನಾಡಿ, ಜಾತ್ರೆ ನಿಮಿತ್ತ ಹುಂಡಿ ಏಣಿಕೆ ಮಾಡಲಾಗಿದೆ. ಏ.23ರಂದು ರಥೋತ್ಸವ ಜರುಗಲಿದ್ದು, ಒಂದು ವಾರಗಳ ಕಾಲ ಜಾತ್ರೆ ನಡೆಯಲಿದೆ. ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದು ಅಗತ್ಯ ಕುಡಿವ ನೀರು, ನೆರಳಿನ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ತೆಂಗಿನಕಾಯಿ ಮಾರಾಟಕ್ಕೆ ಟೆಂಡರ್ನ್ನು ಸ್ಥಳೀಯ ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ ನಾಯಕ ಮಕಾಶಿ 3.70ಲಕ್ಷ ರೂ.ಗೆ ಪಡೆದಿದ್ದಾರೆ. ರಥೋತ್ಸವ ನಂತರ ಜಾನುವಾರುಗಳ ಜಾತ್ರೆ ನಡೆಯಲಿದೆ. ಬಹುಮುಖ್ಯವಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಲು ಸ್ಥಳೀಯ ಗ್ರಾಪಂಗೆ ಸೂಚಿಸಲಾಗಿದೆ. ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ ಎಂದರು.
ಕಂದಾಯ ನಿರೀಕ್ಷಕ ದೇವರೆಡ್ಡಿ ಗಾಣದಾಳ, ಗ್ರಾಮ ಆಡಳಿತಾಧಿಕಾರಿ ರುದ್ರಪ್ಪ ನಾಯಕ, ಮುಖಂಡರಾದ ಭೀಮರಾಯ ಜಗಲಗುಂಡ, ಮಲ್ಲಿಕಾರ್ಜುನ, ದೇವಸ್ಥಾನ ಪೂಜಾರಿಗಳಾದ ಯಂಕೋಬ ಪೂಜಾರಿ, ಸೂರೇಶ ಪೂಜಾರಿ, ಗೋವಿಂದಪ್ಪ ಬಂಡಿ, ರಂಗನಾಥ ಚಿಕ್ಕಲ್, ಗಿರಿಯಪ್ಪ ಪೂಜಾರಿ ಇತರರಿದ್ದರು.