ದೇವದುರ್ಗ: ಸಕಲ ಜೀವರಾಶಿಗಳಿಗೆ ಅನ್ನ ನೀಡುವಂತಹ ರೈತರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕಿದೆ. ವಿಶ್ವ ರೈತ ದಿನ ಎಲ್ಲೆಡೆ ಆಚರಿಸುವ ಜತೆಗೆ ಸರ್ಕಾರದಿಂದ ರೈತರ ದಿನ ಆಚರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಒತ್ತಾಯಿಸಿದರು.
ಸೋಮನಮರಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿವರ್ಷ ಎಲ್ಲ ಕಚೇರಿಗಳಲ್ಲಿ ದಿನ ಆಚರಿಸುವ ಜತೆಗೆ ರೈತ ಗೀತೆಗೆ ಮಾನ್ಯತೆ ನೀಡಬೇಕಿದೆ. ವಿಜ್ಞಾನ-ತಂತ್ರಜ್ಞಾನ, ಆಧುನೀಕತೆ ಬೆಳೆದರೂ ರೈತರ ಸಂಕಷ್ಟಗಳು ದೂರವಾಗಿಲ್ಲ. ಆಡಳಿತ ನಡೆಸಿದ ಎಲ್ಲ ಪಕ್ಷಗಳು ಕೃಷಿಕರನ್ನು ಕಡೆಗಣಿಸುತ್ತಿವೆ. ರೈತರ ಬೆವರ ಹನಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಬೆಳೆಗೆ ಬೆಲೆ ನಿಗದಿ ಮಾಡುವ ಹಕ್ಕು ಹೊಂದಿದಾಗ ಬೆಲೆ ಸಿಗಲು ಸಾಧ್ಯ ಎಂದು ಹೇಳಿದರು. ತಾಲೂಕು ಅಧ್ಯಕ್ಷ ಬೂದಯ್ಯಸ್ವಾಮಿ ಗಬ್ಬೂರು, ಉಮಾಪತಿಗೌಡ ನಗರಗುಂಡ, ಬಸವರಾಜ, ಶಿವಪ್ಪ, ರಾಮಣ್ಣ ಇತರರಿದ್ದರು.