ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಒಂದೂ ಕ್ಷೇತ್ರಗಳನ್ನು ಗೆಲ್ಲದ ಕಾಂಗ್ರೆಸ್ ತೀವ್ರ ಮುಖಭಂಗಕ್ಕೊಳಗಾಗಿದೆ.
ಫಲಿತಾಂಶದ ಬೆನ್ನಲ್ಲೇ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಸುಭಾಷ್ ಚೋಪ್ರಾ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಒಂದೂ ಕ್ಷೇತ್ರವನ್ನು ಗೆಲ್ಲದೆ ಇರುವುದಷ್ಟೇ ಅಲ್ಲ, ಮೂರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಠೇವಣಿ ಗಳಿಸಲೂ ವಿಫಲವಾಗಿದೆ.
ಈ ಹೀನಾಯ ಸೋಲಿನ ಹೊಣೆ ಹೊತ್ತ ಸುಭಾಷ್ ಚೋಪ್ರಾ ಇಂದು ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ನದ್ದು ಶೂನ್ಯ ಸಾಧನೆಯೇ ಆಗಿತ್ತು. ಬಳಿಕ ಸುಭಾಷ್ ಚೋಪ್ರಾ ಪಕ್ಷವನ್ನು ತಳಮಟ್ಟದಿಂದ, ಹೊಸದಾಗಿ ಕಟ್ಟುವ ಪ್ರತಿಜ್ಞೆ ಮಾಡಿದ್ದರು. ಆದರೆ ಈ ಬಾರಿಯೂ ಅದೇ ವಿಫಲತೆ ಮರುಕಳಿಸಿದೆ.
ಜನರ ಆದೇಶ ನಮ್ಮ ವಿರುದ್ಧವಾಗಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. (ಏಜೆನ್ಸೀಸ್)