ಮೂಡಿಗೆರೆ: ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಸಿದ್ಧವಿಲ್ಲ. ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲು ತಯಾರಿ ನಡೆದಿದೆ. ಚುನಾವಣೆ ಬಹಿಷ್ಕಾರ, ಪ್ರತಿಭಟನೆ ಮಾಡುವುದಕ್ಕಿಂತ ಸರ್ಕಾರದ ನಿರ್ಧಾರದ ಮೇಲೆ ರೈತರು ವಿಶ್ವಾಸ ಇಡಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಜನ್ನಾಪುರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಫಾಮ್ರ್ 53ರ ಅಡಿ ಒತ್ತುವರಿ ಸಮಸ್ಯೆಗೆ ಅಂತಿಮ ರೂಪ ನೀಡಲು ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದರು.
ಕಾಡಾನೆ ಸೇರಿ ಮತ್ತಿತರ ವನ್ಯಜೀವಿಗಳ ಹಾವಳಿ ನಿಯಂತ್ರಣಕ್ಕೆ ಮೀಸಲು ಅರಣ್ಯ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ವಿುಸಿ, ಜಮೀನಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಬಜೆಟ್ನಲ್ಲಿ ಸಾಕಷ್ಟು ಅನುದಾನ ಮೀಸಲಿಡಲಾಗುವುದು. ಅಧಿಕಾರಿಗಳು ಸರ್ಕಾರಿ ಸವಲತ್ತುಗಳನ್ನು ರೈತರಿಗೆ ಸತಾಯಿಸದೆ ಮನೆಗೆ ನೇರವಾಗಿ ತಲುಪಿಸಬೇಕು ಎಂದು ತಿಳಿಸಿದರು.