ದಾವಣಗೆರೆ : ತಾಲೂಕಿನ ಬಲ್ಲೂರು ಗ್ರಾಮವನ್ನು ಜೌಗಿನಿಂದ ಮುಕ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು, ಅಥವಾ ಊರನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಿಗಮದ ಕಾರ್ಯಪಾಲಕ ಇಂಜಿನಿಯರ್ಗೆ ಈ ಕುರಿತು ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಗ್ರಾಮವು ನೀರಾವರಿ ಜಮೀನಿನಿಂದ 8 ರಿಂದ 10 ಅಡಿ ಕೆಳ ಭಾಗದಲ್ಲಿದ್ದು ಬಸಿ ಸಮಸ್ಯೆಯನ್ನು ಎದುರಿಸುತ್ತಿದೆ. ಪರಿಣಾಮವಾಗಿ ಗ್ರಾಮದ ಮನೆಗಳ ಗೋಡೆಗಳು ಮತ್ತು ನೆಲ ತೇವಾಂಶದಿಂದ ಕೂಡಿದ್ದು, ವಾಸಕ್ಕೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಇದು ಹಲವು ವರ್ಷಗಳ ಸಮಸ್ಯೆಯಾಗಿದ್ದು ಅನೇಕ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನೂ ನೀಡಿದ್ದಾರೆ. ಆದರೂ 2008 ರಿಂದ ಈವರೆಗೆ ನೀರಾವರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ತುರ್ತು ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವಿಚಾರವಾಗಿ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮದ ರೈತರು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾಧ್ಯಕ್ಷ ಕೆ.ಎಸ್.ಪ್ರಸಾದ್, ರಾಂಪುರದ ಬಸವರಾಜ, ಪರಶುರಾಮ ರೆಡ್ಡಿ, ಮಾಯಕೊಂಡದ ಅಶೋಕ, ಚಿನ್ನಸಮುದ್ರ ಭೀಮನಾಯ್ಕ, ಐಗೂರು ಶಿವಮೂರ್ತಪ್ಪ, ನಾಗರಕಟ್ಟೆ ಜಯನಾಯ್ಕ, ಮಾಯಕೊಂಡದ ಪ್ರತಾಪ್ ಇದ್ದರು.