ದಾವಣಗೆರೆ: ನಗರದ ಮಡಿಕಟ್ಟೆ ನಿರ್ವಹಣೆ, ಕಟ್ಟಡ ದುರಸ್ತಿ, ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ಧೋಬಿಘಾಟ್ ವೃತ್ತಿಪರ ಮಡಿವಾಳರ ಸಂಘಗಳು ಜಂಟಿಯಾಗಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದವು.
ನಗರದ ಹೊರವಲಯದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಧೋಬಿಘಾಟ್ಗೆ ಈ ಹಿಂದೆ ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ 1.5 ಕೋಟಿ ರೂ.ಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಬಟ್ಟೆ ತೊಳೆಯಲು ಅನುಕೂಲ ಆಗುವಂತೆ ಮಡಿಕಟ್ಟೆ ನಿರ್ಮಿಸಲಾಗಿತ್ತು. ಆದರೆ, ಕಟ್ಟಡ ಬಳಕೆ, ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲವಾಗಿದೆ.
ಸ್ಥಳ ಪರಿಶೀಲಿಸಿ ಕಟ್ಟಡ ದುರಸ್ತಿ, ನೀರಿನ ಸೌಲಭ್ಯ ಹಾಗೂ ಬಟ್ಟೆ ತೊಳೆಯುವ ಯಂತ್ರ ವ್ಯವಸ್ಥೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಅಗತ್ಯ ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಡಿವಾಳ ಸಮಾಜದ ಬಾಲಕರ ವಸತಿ ನಿಲಯ ನಿರ್ಮಾಣ ಆಮೆಗತಿಯಲ್ಲಿದ್ದು, ಅದನ್ನು ಪೂರ್ಣಗೊಳಿಸಲು 1.5 ಕೋಟಿಗೂ ಅಧಿಕ ಹಣ ಹಾಗೂ ಸಮಾಜದ ಮಹಿಳಾ ವಿದ್ಯಾರ್ಥಿ ನಿಲಯಕ್ಕಾಗಿ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ನಿವೇಶನವಿದ್ದು, ನೂತನ ನಿಲಯಕ್ಕೆ ಸುಮಾರು 3 ಕೋಟಿ ರೂ. ಹಣ ಅವಶ್ಯಕವಿದ್ದು, ಸಂಬಂಧಪಟ್ಟ ಇಲಾಖೆಗೆ ಸೂಚಿಸಿ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಹಣ ಮಂಜೂರು ಮಾಡಿಸಿಕೊಡಲು ವಿನಂತಿಸಿದರು.
ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಎಂ. ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಎಚ್.ಜಿ. ಉಮೇಶ್, ಉಪಾಧ್ಯಕ್ಷ ಜಿ. ವಿಜಯ್ಕುಮಾರ್, ನಿರ್ದೇಶಕ ಎಂ.ವೈ. ಸತೀಶ್, ಮಡಿಕಟ್ಟೆ ಅಧ್ಯಕ್ಷ ಜಿ. ಕಿಶೋರ್ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಬಸವರಾಜ್, ಹನುಮಂತಪ್ಪ, ಎಂ.ರವಿಕುಮಾರ್, ಲಿಂಗರಾಜ್, ಸಂಜು ಇದ್ದರು.