More

    ಅಗಲಿದ ಹಿರಿಯ ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

    ಬೆಂಗಳೂರು:
    ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್, ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನುಡಿ ನಮನ ಸಲ್ಲಿಸಿ, ಅವರೆಲ್ಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಹಿರಿಯ ಚೇತನಗಳ ಸ್ಮರಣಾರ್ಥ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು.
    ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನುಡಿನಮನ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಅಗಲಿದ ಹಿರಿಯ ಪತ್ರಕರ್ತರರುಗಳು ಕೆಯುಡಬ್ಲ್ಯೂಜೆ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.

    ಜಿನ್ನಾರ್ ಶಿಸ್ತಿನ ಸಿಪಾಯಿ: ಬಿ.ಕೆ ರವಿ
    ಕೊಪ್ಪಳ ವಿ.ವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ್ ರಾವ್ ಅವರು ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಸಾಪ್ತಾಹಿಕವನ್ನು ಅವರು ವಿಭಿನ್ನವಾಗಿ ರೂಪಿಸಿದರಲ್ಲದೆ, ಪತ್ರಿಕೋದ್ಯಮದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿಯೂ ಜನಪ್ರಿಯರಾದರು ಎಂದು ತಮಗೆ ಮಾರ್ಗದರ್ಶನ ನೀಡಿದ ನೆನಪನ್ನು ಮೆಲುಕು ಹಾಕಿದರು. ಅಗಲಿದ ಹಿರಿಯರ ನೆನಪಿನಲ್ಲಿ ಕೆಯುಡಬ್ಲ್ಯೂಜೆ ಕಾರ್ಯಕ್ರಮ ರೂಪಿಸಿ ಮಾದರಿ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು. ಸಚ್ಚಿದಾನಂದಮೂರ್ತಿ ಅವರು ದೆಹಲಿಯಲ್ಲಿ ಮೂರು ದಶಕಗಳ ಕಾಲ ಪತ್ರಕರ್ತನಾಗಿ ಉತ್ತಮ ಸೇವೆ ಸಲ್ಲಿಸಿದರು ಎಂದು ಘಟನೆಗಳನ್ನು ಮೆಲುಕು ಹಾಕಿದರು.

    ಸಚ್ಚಿ ವಿಭಿನ್ನ ಪ್ರತಿಭೆ: ಎಚ್.ಬಿ.ದಿನೇಶ್
    ದೆಹಲಿ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ್ದ ಕೆ.ಎಸ್.ಸಚ್ಚಿದಾನಂದ ಮೂರ್ತಿ ಸದಾ ಸ್ನೇಹಪರರಾಗಿದ್ದರು. ರಾಜ್ಯದ ಅಭಿವೃದ್ಧಿ ಯೋಜನೆಗೆ ದೆಹಲಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದರು. ಅವರಷ್ಟು ಸ್ನೇಹಮಯಿ ಪತ್ರಕರ್ತರು ಅಪರೂಪ ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಹೇಳಿದರು.

    ಸಿಆರ್‌ಕೆ ಚಳುವಳಿಗಳ ನೇತಾರ: ಸಿದ್ಧನಗೌಡ ಪಾಟೀಲ್
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸಿ.ಆರ್.ಕೃಷ್ಣರಾವ್ ಅವರು ಚಳುವಳಿಗಳ ನೇತಾರ ಆಗಿದ್ದರು ಎಂದು ನವಕರ್ನಾಟಕ ಪಬ್ಲಿಕೇಶನ್ಸ್‌ನ ಹೊಸತು ಮಾಸಿಕದ ಸಂಪಾದಕ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು. ಸಿ.ಆರ್.ಕೆ. ರಾವ್ ಅವರು ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ ಕೊಂಡಿಯಾಗಿ ಪ್ರಧಾನ ಪಾತ್ರ ವಹಿಸಿಕೊಂಡಿದ್ದರು ಎಂದೂ ಗುಣಗಾನ ಮಾಡಿದರು.

    ಕೆ.ಪ್ರಹ್ಲಾದರಾವ್ ಕ್ರೀಯಾಶೀಲ ಪತ್ರಕರ್ತ: ಪಿ.ಶೇಷಚಂದ್ರಿಕಾ
    ಕೋಲಾರವು ಹಿರಿಯ ಪತ್ರಕರ್ತರಾಗಿದ್ದ ಕೆ.ಪ್ರಹ್ಲಾದರಾವ್ ಅವರ ಕರ್ಮಭೂಮಿ ಆಗಿದ್ದರೂ, ಕ್ರೀಯಾಶೀಲ ಪತ್ರಕರ್ತರಾಗಿ ಜಿಲ್ಲಾ ಮಟ್ಟದ ಪತ್ರಕರ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ಅವರು ಸರ್ಕಾರ ಅಧಿಕಾರಿಗಳ ಬಳಿಗೆ ಹೋಗುವ ಮೂಲಕ ಉತ್ತಮ ಸಂಘಟಕರೂ ಆಗಿದ್ದರು ಎಂದು ಹಿರಿಯ ಪತ್ರಕರ್ತ ಪಿ.ಶೇಷಚಂದ್ರಿಕಾ ನುಡಿದರು.

    ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ ಅವರು ಮಾತನಾಡಿ, ತಾವು ಬೆಂಗಳೂರುಬಂದ ಸಂದರ್ಭದಲ್ಲಿ ಇವರೆಲ್ಲರ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.
    ಹಿರಿಯ ಪತ್ರಕರ್ತರಾಗಿದ್ದ ಪಿ.ಎಂ.ಮಣೂರ ಅವರ ಬಗ್ಗೆ ಐಎ್ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿದರು.
    ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಜೆ.ಎಂ.ಚಂದುನವರ, ಸಾಗ್ಗರೆ ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಚೇತನಗಳ ಗುಣಗಾನ ಮಾಡಿದರು.

    ವಿತರಕರಿಬ್ಬರ ಸಾವಿಗೆ ಸಂತಾಪ:
    ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಾದ ಕುಮಾರ್ ಮತ್ತು ಮನೋಜ್ ಅವರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಅವರುಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ಘಟಕದ ಸೋಮಶೇಖರ ಗಾಂಧಿ, ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ ಸೇರಿದಂತೆ ಮತ್ತಿತರರು ಹಾಜರಿದ್ದರು.

    ಅಗಲಿದ ಹಿರಿಯ ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts