ಬೆಂಗಳೂರು: 1998ನೇ ಸಾಲಿನ ಕೆಎಎಸ್ ಅಕ್ರಮ ನೇಮಕಾತಿ ಹಗರಣದ ಸಂಬಂಧ 2016ರಲ್ಲಿ ವಿಭಾಗೀಯ ಪೀಠ ನೀಡಿರುವ ಆದೇಶ ಪಾಲನೆಯಲ್ಲಾಗಿರುವ ಲೋಪವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಆಯೋಗದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿಪಡಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿದೆ.
ಚನ್ನಪ್ಪ ಮತ್ತಿತರರ ಅರ್ಥಿಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಲೋಪಗಳನ್ನು ಸರಿಪಡಿಸಲು ಶುಕ್ರವಾರದವರೆಗೆ ಸಮಯಾವಕಾಶ ನೀಡಿತು.
ನ್ಯಾಯಾಲಯ ಮಂಗಳವಾರ ನೀಡಿದ್ದ ನಿರ್ದೇಶನದಂತೆ ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ಖುದ್ದು ನ್ಯಾಯಪೀಠದ ಮುಂದೆ ಹಾಜರಿದ್ದರು. ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿದ ಪೀಠ, ಶುಕ್ರವಾರ ಮಧ್ಯಾಹ್ನದೊಳಗೆ ಆಗಿರುವ ಲೋಪ ಸರಿಪಡಿಸದಿದ್ದರೆ, ಈಗಾಗಲೇ ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆ ಸಾಬೀತಾಗಿರುವ ಕಾರಣ, ಕಾರ್ಯದರ್ಶಿ ವಿರುದ್ಧ ಆರೋಪ ನಿಗದಿಪಡಿಸಲಾಗುವುದು ಎಂದು ಎಚ್ಚರಿಸಿ ವಿಚಾರಣೆ ಮುಂದೂಡಿತು.
ಕೆಪಿಎಸ್ಸಿ ವಾದ ಒಪ್ಪದ ಕೋರ್ಟ್: ಇದಕ್ಕೂ ಮುನ್ನ ಕೆಪಿಎಸ್ಸಿ ಪರ ವಕೀಲರು, 2016ರಲ್ಲಿ ವಿಭಾಗೀಯಪೀಠ ನೀಡಿದ್ದ ನಿರ್ದೇಶನದಲ್ಲಿ ಕೆಲ ಗೊಂದಲವಿತ್ತು. ಆ ಕುರಿತು ಸ್ಪಷ್ಟನೆ ಕೋರಲಾಗಿದ್ದರೂ, ನ್ಯಾಯಾಲಯ ಯಾವುದೇ ವಿವರಣೆ ನೀಡಿಲ್ಲ. ಕೋರ್ಟ್ ಆದೇಶದಂತೆ ಹೊಸದಾಗಿ 91 ಅಭ್ಯರ್ಥಿಗಳ ಉತ್ತರಪತ್ರಿಕೆಗಳನ್ನು ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಆಯೋಗದ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಈ ವಾದವನ್ನು ತಳ್ಳಿಹಾಕಿದ ಪೀಠ, ಕೋರ್ಟ್ 91 ಉತ್ತರ ಪತ್ರಿಕೆಗಳನ್ನು ಪರಿಗಣಿಸಲು ಹೇಳಿದೆ. ಆದರೆ ಆಯೋಗ 91 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಗಣಿಸಿದೆ. ಈ ಕುರಿತು ಗೊಂದಲವಿದ್ದರೆ ಸ್ಪಷ್ಟನೆ ಪಡೆಯಬಹುದಿತ್ತು. ಅದರ ಬದಲಿಗೆ ಆಯೋಗ ಕೋರ್ಟ್ ಆದೇಶವನ್ನು ತನಗೆ ಬೇಕಾದ ಹಾಗೆ ಅರ್ಥೈಸಿಕೊಂಡು ಜಾರಿಗೊಳಿಸಿದೆ ಎಂದು ಹೇಳಿತು.