ಬಾಗಲಕೋಟೆ: ಮುಧೋಳದಲ್ಲಿ ಪೊಲೀಸ್ ಪೇದೆಯೋರ್ವರಿಗೆ ಕರೊನಾ ಸೋಂಕು ತಗುಲಿದ್ದು ತೀವ್ರ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಪೊಲೀಸರಿಗೆ ವೈರಸ್ ತಗುಲಿದ ಮೊದಲ ಪ್ರಕರಣ ಇದಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದ ಅವರಲ್ಲಿ ಈಗ ಕರೊನಾ ದೃಢಪಟ್ಟಿದೆ. ಈ ಪೊಲೀಸ್ ಪೇದೆಯ ಸಹೋದ್ಯೋಗಿಗಳು ಮತ್ತು ಸಂಪರ್ಕಕ್ಕೆ ಬಂದವರನ್ನೆಲ್ಲ ಗುರುತಿಸಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ಜಮಖಂಡಿ ಪೊಲೀಸ್ ವಸತಿಗೃಹದಲ್ಲಿ ನೆಲೆಸಿದ್ದ ಪೇದೆ, ಪ್ರತಿದಿನ ಮುಧೋಳ ಠಾಣೆ ಸಿಪಿಐ ಕಚೇರಿಗೆ ಹೋಗುತ್ತಿದ್ದರು. ಅಲ್ಲಿಂದ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.
ಪೊಲೀಸ್ ಪೇದೆಗೆ ಕರೊನಾ ತಗುಲಿದ್ದರ ಬಗ್ಗೆ ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್ ಮಾತನಾಡಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಠಾಣಾ ಮಟ್ಟ, ಮೀಸಲು ಪಡೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಗಮನಹರಿಸುತ್ತಿದ್ದೇವೆ. ಎಲ್ಲ ಸಿಬ್ಬಂದಿಗೂ ಗ್ಲೌಸ್ ನೀಡಿದ್ದೇವೆ. ಠಾಣೆಯನ್ನು ಡಿಸ್ ಇನ್ಫೆಕ್ಟ್ ಮಾಡುತ್ತಿದ್ದೇವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೂ ಪೇದೆಗೆ ಕರೊನಾ ವೈರಸ್ ತಗುಲಿದೆ ಎಂದು ಹೇಳಿದ್ದಾರೆ. ಹಾಗೇ ಪೇದೆ ಸದ್ಯ ಆರೋಗ್ಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)
ರಾಜ್ಯದಲ್ಲಿ ವೈರಸ್ ಪೀಡಿತರ ಸಂಖ್ಯೆ 277ಕ್ಕೆ ಏರಿಕೆ:- 11 ಸಾವು: ನಂಜನಗೂಡಿನಲ್ಲಿ ಒಂದೇ ದಿನ 8 ಸೋಂಕಿತರು ಪತ್ತೆ