ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹಿರಿಯ ಅಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದಾರೆ.
ಆದರೆ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಎಲ್ಲ ಮಳಿಗೆಗಳನ್ನೂ ಬಂದ್ ಮಾಡಬೇಕಿದ್ದರೂ ಸೂಪರ್ ಮಾರ್ಕೆಟ್ಗಳು ತೆರೆದೇ ಇವೆ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹಣ ಪಡೆದು ಸೂಪರ್ ಮಾರ್ಕೆಟ್ ತೆರೆಯಲು ಅನುಮತಿ ಕೊಟ್ಟಿದ್ದಾರೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪದಿಂದ ಬೇಸರಗೊಂಡ ಭಾಸ್ಕರ್ ರಾವ್, ಇಂತಹ ಮಾತುಗಳನ್ನೆಲ್ಲ ಕೇಳಿಕೊಂಡು ನಾನು ಇರಬೇಕಾ? ಬೇಡವಾ ಎಂದು ನೀವೇ ನಿರ್ಧರಿಸಿ ಎಂದು ಸಿಎಂಗೆ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಆನ್ಲೈನ್ ಫುಡ್ ಡೆಲಿವರಿಯವರಿಗೆ ಹೆಚ್ಚಿನ ಪಾಸ್ ನೀಡುವಂತೆ ಭಾಸ್ಕರ್ ರಾವ್ಗೆ ಈ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಅದಕ್ಕೆ ಒಪ್ಪದ ಆಯುಕ್ತರು, ಎಲ್ಲರಿಗೂ ಪಾಸ್ ನೀಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಅಷ್ಟಕ್ಕೇ ಡಿಸಿಎಂ, ಭಾಸ್ಕರ್ ರಾವ್ ವಿರುದ್ಧ ಏರುಧ್ವನಿಯಲ್ಲಿ ಕೂಗಾಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಇಷ್ಟೆಲ್ಲ ಆರೋಪ ಕೇಳಿಬಂದಿದ್ದರಿಂದ ನೊಂದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಣ್ಣಲ್ಲಿ ನೀರು ಹಾಕಿ, ಅಲ್ಲಿಂದ ಎದ್ದು ಹೋಗಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಿಎಂ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಭಾಸ್ಕರ್ ರಾವ್ ಡಿಸಿಎಂ ಮಾತಿನಿಂದ ಕಣ್ಣಲ್ಲಿ ನೀರು ಹಾಕಿದ ಬಗ್ಗೆ ಖಚಿತವಾಗಿಲ್ಲ.(ದಿಗ್ವಿಜಯ ನ್ಯೂಸ್)
ಹೊರಗಿನವರಿಗೆ ಪ್ರವೇಶ ನಿಷೇಧಿಸಿದ ಗ್ರಾಮಸ್ಥರು: ಕರೊನಾ ಸೋಂಕಿನ ಆತಂಕ ಕಾರಣ