ಕೂಡ್ಲಿಗಿ: ಕರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿ ಕೆಲಸಗಳು ಸ್ಥಗಿತಗೊಂಡರೂ ನರೇಗಾ ಯೋಜನೆಯ ಕೆಲಸಗಳು ಮಾತ್ರ ಯಾವುದೇ ಆತಂಕವಿಲ್ಲದೆ ನಡೆಯುತ್ತಿದೆ. ಜಿಪಂ ಸಿಇಒ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಖಾತ್ರಿ ಕೆಲಸ ನೀಡಬೇಕೆಂಬ ನಿರ್ದೇಶನದ ಮೇರೆಗೆ ತಾಲೂಕಿನ 36 ಗ್ರಾಪಂಗಳಲ್ಲಿ ಖಾತ್ರಿ ಯೋಜನೆ ಕೆಲಸಗಳು ನಡೆದಿವೆ. ಎಲ್ಲ ಪಂಚಾಯಿತಿಗಳಲ್ಲಿ ಕೂಲಿ ಕಾರ್ಮಿಕರಿಗೆ ಪ್ರತಿ ಕೆಲಸ ನೀಡಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕರೊನಾ ರೋಗದ ಕುರಿತು ಅಧಿಕಾರಿಗಳು ಜಾಗೃತಿ ಫಲಕ ಹಾಕಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಕೂಲಿ ಕಾರ್ಮಿಕರಿಗೆ ಕೈ ತೊಳೆಯಲು ಸೋಪು ಹಾಗೂ ಕುಡಿಯಲು ಶುದ್ಧ ನೀರು ಪೂರೈಸಲಾಗುತ್ತಿದೆ. ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಸಹ ಕೈಗೊಂಡಿದೆ ಎಂದು ಇಒ ಜಿಎಂ ಬಸಣ್ಣ ತಿಳಿಸಿದ್ದಾರೆ. ನರೇಗಾ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರು ಒಂದೆಡೆ ಸೇರದೆ 5 ರಿಂದ 6 ಜನರ ಗುಂಪು ರಚಿಸಿ ಕೆಲಸ ನೀಡಲಾಗಿದ್ದು, ಕರೊನಾ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದೇವೆ ಎಂದರು.