ಹೂವಿನಹಡಗಲಿ: ಕರೊನಾ ವೈರಸನ್ನು ಎಲ್ಲರೂ ದಿಟ್ಟತನದಿಂದ ಎದುರಿಸಬೇಕು. ಸೋಂಕಿತರನ್ನು ಅಸ್ಪಶ್ಯರಂತೆ ನೋಡಬಾರದು ಎಂದು ಕಾಗಿನೆಲೆ ಕನಕಗುರು ಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಮೈಲಾರ ಗ್ರಾಮದ ಕಾಗಿನೆಲೆ ಕನಕಗುರು ಪೀಠದ ಶಾಖಾ ಮಠದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೈಗೊಂಡಿರುವ 3 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಸೋಂಕಿತ ವ್ಯಕ್ತಿ ಮೃತಪಟ್ಟಾಗ ಶವ ಸಂಸ್ಕಾರಕ್ಕೆ ವಿರೋಧಿಸುವ ಬದಲು ಗೌರವಯುತ ಸಂಸ್ಕಾರಕ್ಕೆ ಸಹಕರಿಸಬೇಕು. ಸಂಕಷ್ಟದ ಕಾಲದಲ್ಲಿ ಮಾನವೀಯತೆ ಮಣ್ಣು ಪಾಲಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.
ಮೈಲಾರ ಶಾಖಾ ಮಠದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಚಿವ ಕೆ.ಎಸ್.ಈಶ್ವರಪ್ಪ 3 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಅನುದಾನ ಬಳಸಿಕೊಂಡು ಮಠದಲ್ಲಿ ಚರಂಡಿ, ಸಿಸಿ ರಸ್ತೆ, ಇತರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ. ಮೈಲಾರ ಶಾಖಾ ಮಠದಿಂದ ಶಿಕ್ಷಣ ಸಂಸ್ಥೆ, ವಸತಿ ನಿಲಯ ಆರಂಭಿಸುವ ಪ್ರಸ್ತಾವನೆಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾತಿ ಆದೇಶ ಬರುವ ನಿರೀಕ್ಷೆ ಇದ್ದು, ಶೀಘ್ರವೇ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಕಾಗಿನೆಲೆ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಕಾಗಿನೆಲೆ ಮಠವು ಶಾಂತಿ, ಸೌಹಾರ್ದತೆ ಪ್ರತಿಪಾದಿಸುತ್ತಿದೆ ಎಂದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು. ಜಿಪಂ ಸದಸ್ಯ ಎಸ್.ಕೊಟ್ರೇಶಪ್ಪ, ತಾಪಂ ಸದಸ್ಯರಾದ ಈಟಿ ಲಿಂಗರಾಜ, ಅಂಬ್ಲಿ ಮಲ್ಲಿಕಾರ್ಜುನ, ಕಾರ್ಣಿಕದ ರಾಮಣ್ಣ, ಕುರುಬರ ಸಂಘದ ರಾಜ್ಯ ನಿರ್ದೇಶಕ ಬಿ.ಹನುಮಂತಪ್ಪ, ತಾಲೂಕು ಅಧ್ಯಕ್ಷ ಎಚ್.ಬೀರಪ್ಪ, ಕೆಆರ್ಐಡಿಎಲ್ ಸಹಾಯಕ ನಿರ್ದೇಶಕ ರಮೇಶ ಇದ್ದರು.