ಉಡುಪಿ: ದೇಶದಲ್ಲಿ ಅಸಮಧಾನದ ಲಾವಾರಸ ಹರಿಯುತ್ತಿದೆ. ದುರಾದೃಷ್ಟವಶಾತ್ ಪ್ರಜಾಪ್ರಭುತದಲ್ಲಿ ಹತಾಶೆ ಭಾವನೆ ಮೂಡುತ್ತಿದೆ. ಜ್ವಾಲಾಮುಖಿ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ಕೋಟಿ ಜನಸಂಖ್ಯೆ ಹೊಂದಿರುವ ಜನಾಂಗವನ್ನು ಬಿಜೆಪಿ ದೂರ ಮಾಡುತ್ತಿದೆ. ಇತ್ತೀಚೆಗೆ ನಾಗಾಲ್ಯಾಂಡ್ ನಲ್ಲಿ 4 ಲಕ್ಷ ಮಂದಿ ಮತದಾನ ಬಹಿಷ್ಕರಿಸಿದ್ದಾರೆ. 2019ರಲ್ಲಿ ಸರ್ಜಿಕಲ್ ಸ್ಟ್ರೆ$ಕ್ ಮೂಲಕ ದೇಶಭಕ್ತಿ ಭಾವನೆ ಪ್ರಚೋದನೆ ಮಾಡಿ ಗೆಲುವು ಸಾಧಿಸಿದ್ದರು. ಅದೆಲ್ಲವೂ ಚುನಾವಣೆಗಾಗಿ ಮಾಡಿದ ನಾಟಕ ಎಂಬುದಾಗಿ ಅಂದಿನ ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಆದರೆ ಈ ಬಾರಿ ಇಂಥ ಗಿಮಿಕ್ ನಡೆಯುವುದಿಲ್ಲ. ಜನ ಎಚ್ಚತ್ತುಕೊಳ್ಳುತ್ತಿದ್ದಾರೆ ಎಂದರು.
ಒನ್ ನೇಶನ್ & ಒನ್ ಎಲೆಕ್ಷನ್ ಅಸಾಧ್ಯ
2004, 2009, 2014ರಲ್ಲಿ 20 ದಿನದಲ್ಲಿ ಲೋಕಸಭಾ ಚುನಾವಣೆ ಮುಗಿದಿತ್ತು. ಈಗ 60 ದಿನ ತೆಗೆದುಕೊಂಡಿದೆ. ಇನ್ನು ಒನ್ ನೇಶನ್ & ಒನ್ ಎಲೆಕ್ಷನ್ ಮೋದಿ ಜಾರಿಗೊಳಿಸಿದರೆ ಗ್ರಾಪಂ ನಿಂದ ಪಾರ್ಲಿಮೆಂಟ್ವರೆಗೆ ಚುನಾವಣೆಗೆ 1 ವರ್ಷವೇ ಬೇಕಾಗಬಹುದು. ಮೋದಿಯವರು ರಾಷ್ಟ್ರದ ಮೇಲೆ ವೈಯಕ್ತಿಕ ಅಭಿಪ್ರಾಯ ಹೇರುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 12 ಕೋಟಿ ಗ್ರಾಹಕರಿಗೆ ಗ್ಯಾಸ್ ಸಬ್ಸಿಡಿ ನೀಡಲಾಗುತ್ತಿತ್ತು. ಪ್ರಸ್ತುತ ಗ್ಯಾಸ್ ಸಬ್ಸಿಡಿಯನ್ನು ರದ್ದುಪಡಿಸಲಾಗಿದೆ. 15ನೇ ಹಣಕಾಸು ಆಯೋಗದ ಶಿಾರಸ್ಸಿನಂತೆ 15 ಸಾವಿರ ಕೋಟಿ ರೂ. ಕರ್ನಾಟಕಕ್ಕೆ ಬರಬೇಕು. ಅದನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಬಿಜೆಪಿ ಈ ಬಾರಿ 150 ರಿಂದ 180 ಸ್ಥಾನ ಮಾತ್ರ ಗಳಿಸಲಿದೆ. ರಾಜ್ಯದಲ್ಲಿ ಈ ಹಿಂದೆ 28 ಸ್ಥಾನ ಕಾಂಗ್ರೆಸ್ ಗೆದ್ದಿರುವ ಇತಿಹಾಸವಿದ್ದು, ಇದು ಪುನರಾವರ್ತನೆಯಾದರೂ ಆಶ್ಚರ್ಯವಿಲ್ಲ ಎಂದರು.
ಜನಗಣತಿಯೇ ಮಾಡಿಲ್ಲ
ಯುಪಿಎ ಸರ್ಕಾರದ ಆಡಳಿತಾವಧಿ ಕೊನೆಯಲ್ಲಿ ಮೀನುಗಾರರನ್ನು ಕೆಟಗರಿ 1 ಮೀಸಲಾತಿಗೆ ಸೇರಿಸಲು ಕ್ಯಾಬಿನೆಟ್ ಮುಂದೆ ಪ್ರಸ್ತಾವನೆ ಮಂಡಿಸಲಾಗಿತ್ತು. ಆದರೆ ಜನಗಣತಿ ವರದಿ ಲಭ್ಯವಿಲ್ಲದೆ ವಿಳಂಬವಾಗಿತ್ತು. ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷವಾದರೂ ಮೀನುಗಾರರಿಗೆ ಮೀಸಲಾತಿ ನೀಡಿಲ್ಲ. ಕಳೆದ 182 ವರ್ಷಗಳಿಂದ ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆದಿದೆ. ಮೊದಲ ಬಾರಿಗೆ ಎನ್ ಡಿ ಎ ಸರ್ಕಾರ ಜನಗಣತಿ ಮಾಡಿಲ್ಲ ಎಂದು ಆರೋಪಿಸಿದರು.
ನಟ ಶಿವರಾಜ್ ಕುಮಾರ್, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವಕುಮಾರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮಾಜಿ ಸಚಿವ ವಿಜಯಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ಎಂ.ಎ. ಗೂರ್, ಉದಯ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಭಾಸ್ಕರ ರಾವ್ ಕಿದಿಯೂರು, ಪಿ.ಆರ್. ರಾಜು ಮೊದಲಾದವರು ಉಪಸ್ಥಿತರಿದ್ದರು.