ನವದೆಹಲಿ: ಬಹುಕೋಟಿ ಭಾರತೀಯರ ನಂಬಿಕೆ, ಶ್ರದ್ಧೆ, ಅಸ್ಮಿತೆಯಾಗಿರುವ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಕನಸು ನನಸಾಗಿಸುವ ಕೆಲಸಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ಈ ಐತಿಹಾಸಿಕ ಕ್ಷಣದ ಬಗ್ಗೆ ಭಾರತೀಯರೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ ಮೊಹಮದ್ ಕೈಫ್ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಕೋಮು ಸೌಹಾರ್ದತೆ ಹರಡುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಧಾರ್ಮಿಕ ದ್ವೇಷದ ಮೂಲಕ ತಮ್ಮ ಕಾಲೆಳೆಯಲು ಬರುವವರಿಗೆ ಮೊದಲೇ ಚಾಟಿಯನ್ನೂ ಬೀಸಿದ್ದಾರೆ.
‘ಗಂಗಾ-ಜಮುನಾ ಸಂಸ್ಕೃತಿಯ ಅಲಹಾಬಾದ್ ನಗರದಲ್ಲಿ ಬೆಳೆದವರು ನಾನು. ಕರುಣೆ, ಸಹ-ಬಾಳ್ವೆ, ಮೌಲ್ಯ ಮತ್ತು ಗೌರವಗಳಿಂದ ಕೂಡಿದ ಕಥೆ ರಾಮಲೀಲಾ ನೋಡುವುದನ್ನು ಇಷ್ಟಪಟ್ಟಿದ್ದೇನೆ. ರಾಮ ದೇವರು ಎಲ್ಲರಲ್ಲೂ ಒಳ್ಳೆಯದನ್ನು ಕಂಡಿದ್ದಾರೆ. ನಮ್ಮ ನಡವಳಿಕೆಯಲ್ಲೂ ಅವರ ಗುಣವನ್ನು ತೋರಿಸಬೇಕು’ ಎಂದು ಮೊಹಮದ್ ಕೈಫ್ ಟ್ವೀಟ್ ಮಾಡಿದ್ದಾರೆ. ಅದರ ಕೊನೆಯಲ್ಲಿ ಅವರು, ‘ಪ್ರೀತಿ ಮತ್ತು ಏಕತೆಯ ದಾರಿಯಲ್ಲಿ ದ್ವೇಷದ ಏಜೆಂಟರು ಬರಲು ಅವಕಾಶ ನೀಡಬೇಡಿ’ ಎಂದು ಟೀಕಾಕಾರರಿಗೆ ದಿಟ್ಟ ತಿರುಗೇಟು ಕೂಡ ನೀಡಿದ್ದಾರೆ.
ಇದನ್ನೂ ಓದಿ: ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ ನಂ. 1, ರೋಹಿತ್ ಶರ್ಮ ನಂ. 2
39 ವರ್ಷದ ಮೊಹಮದ್ ಕೈಫ್ ಭಾರತ ಪರ 125 ಏಕದಿನ ಮತ್ತು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಭಾರತ ತಂಡದ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಕೂಡ ರಾಮಮಂದಿರ ಶಿಲಾನ್ಯಾಸದ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದು, ಇದು ಸಂಭ್ರಮಿಸುವ ದಿನ ಎಂದಿದ್ದಾರೆ. ಜತೆಗೆ ರಾಮಮಂದಿರ ನಿರ್ಮಾಣಕ್ಕೆ ಕಾರಣರಾಗಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಟ್ವೀಟಿಸಿದ್ದಾರೆ.
Growing up in Allahabad,a city with Ganga-Jamuna culture,I loved watching Ramlila-a tale of compassion,co-exsistence,honour and dignity.Lord Ram saw goodness in everyone and our conduct should reflect his legacy.Don’t allow the agents of hate to come in the way of love and unity.
— Mohammad Kaif (@MohammadKaif) August 5, 2020