ಮಂಗಳೂರು: ಅಂಬೇಡ್ಕರ್ ವೃತ್ತ ಬಳಿಯ ಜ್ಯೋತಿ ಟಾಕೀಸ್ ಮುಂಭಾಗ ತಳ್ಳುಗಾಡಿಯಲ್ಲಿ ಸೀಯಾಳ ಮಾರುತ್ತಿದ್ದ ಸತ್ಯನಾರಾಯಣ ಎಂಬುವರನ್ನು ಸೋಮವಾರ ಮಧ್ಯಾಹ್ನ ಪರಿಚಯಸ್ಥ, ಪಿಕ್ಪಾಕೆಟರ್ ಆಗಿರುವ ಮಣಿ ಯಾನೆ ಮಣಿಕಂಠ ಎಂಬಾತ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಮಧ್ಯಾಹ್ನ 12.30ರ ವೇಳೆಗೆ ಗಾಡಿಯ ಬಳಿ ಬಂದ ಮಣಿ 100 ರೂ. ಸಾಲ ಕೇಳಿದ್ದು, ಸತ್ಯನಾರಾಯಣ ಹಣ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಆತ ಅವಾಚ್ಯ ಶಬ್ದಗಳಿಂದ ಬೈದು ಜೋರು ಮಾಡಿದ್ದ, ಆದರೂ ಹಣ ನೀಡಿಲ್ಲ. ಇದರಿಂದ ಕ್ರೋಧಗೊಂಡ ಆತ ಎಳನೀರು ಕೊಯ್ಯಲು ಇಟ್ಟಿದ್ದ ಚೂರಿಯಿಂದ ಸತ್ಯನಾರಾಯಣ ಅವರ ಹೊಟ್ಟೆಗೆ ಬಲವಾಗಿ ಚುಚ್ಚಿದ್ದಾನೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.