ಬೆಂಗಳೂರು: ಎರಡನೇ ಹಂತದ ಕರೊನಾ ಲಾಕ್ಡೌನ್ ಮೇ 3 ರಂದು ಕೊನೆಯಾಗಲಿದ್ದು, ಅಲ್ಲಿಯವರೆಗೆ ಪರಿಶೀಲಿಸಿ ಲಾಕ್ಡೌನ್ ಸಡಿಲಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಸಚಿವ ಸಂಪುಟ ಸಭೆ ಮುಕ್ತಾಯವಾದ ಬಳಿಕ ಮಾತನಾಡಿ, ಕರ್ನಾಟಕದಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿದೆ. ಬೆಂಗಳೂರಿನ ಸುತ್ತಾಮುತ್ತ ಕೈಗಾರಿಕೆಗಳನ್ನು ಆರಂಭಿಸಲು ಅನುಕೂಲ ಮಾಡಿಕೊಡುತ್ತೇವೆ. ಸಾರ್ವಜನಿಕರು ಕರ್ಫ್ಯೂ ಪಾಲನೆ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗೋದು ಬೇಡ. ಚೇತರಿಕೆ ಆದವರು ಹಾಗೂ ವಾರಿಯರ್ಸ್ಗಳು ಆತ್ಮಸ್ಥೈರ್ಯ ತುಂಬಬೇಕು. ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದರು.
ಇದನ್ನೂ ಓದಿ: ಮಾಸ್ಕ್ ಧರಿಸದಿದ್ದರೆ ನೇರ ಜೈಲಿಗೆ, ಜತೆಗೆ ಭಾರಿ ದಂಡ! ಬಂದಿದೆ ಹೊಸ ನಿಯಮ…
ರೆಡ್ ಝೋನ್ ಹೊರತುಪಡಿಸಿ ಎಲ್ಲಾ ಕಡೆ ಕೈಗಾರಿಕೆ ಆರಂಭಕ್ಕೆ ಅನುಮತಿ ನೀಡಲಾಗುವುದು. ಹೇರ್ ಕಟಿಂಗ್ ಸಲೂನ್, ಮದ್ಯದ ಅಂಗಡಿ ತೆರೆಯುವ ಬಗ್ಗೆ ಮೇ 3ರ ನಂತರ ನಿರ್ಧಾರ ಮಾಡಲಾಗುವುದು. ಹೊರ ರಾಜ್ಯದಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇನ್ನೆರಡು ಮೂರು ತಿಂಗಳು ಕರೊನಾ ವೈರಸ್ ಪರಿಸ್ಥಿತಿ ಹೀಗೆ ಇರಲಿದೆ. ಎರಡ್ಮೂರು ತಿಂಗಳು ಲಾಕ್ಡೌನ್ ಮುಂದುವರೆದರೂ ಆಶ್ಚರ್ಯಪಡಬೇಕಿಲ್ಲ. ನಾಲ್ಕನೇ ತಾರೀಖಿನ ನಂತರ ಪ್ರಧಾನಿ ಮೋದಿ ಕೆಲವು ಸೂಚನೆಗಳನ್ನು ಕೊಡಲಿದ್ದಾರೆ. ಬಳಿಕ ಹಂತ ಹಂತವಾಗಿ ಸಡಿಲಿಕೆ ಮಾಡೋ ಬಗ್ಗೆ ಚರ್ಚೆ ಮಾಡಿದ್ದೀವಿ. ಎರಡೂ ಕೂಡ ಜತೆಯಲ್ಲೇ ಆಗಬೇಕು. ಮಾಲ್ಗಳು ತೆರೆಯುವುದರ ಬಗ್ಗೆ ತೀರ್ಮಾನ ಆಗಿಲ್ಲ. ಮೇ ಮೂರು ಅಥವಾ ನಾಲ್ಕರ ನಂತರ ತೀರ್ಮಾನ ಮಾಡಲಾಗುತ್ತದೆ. ನಮಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತೆ ಎಂಬ ನಿರೀಕ್ಷೆ ಇದೆ ಎಂdu ಸಿಎಂ ಬಿಎಸ್ವೈ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿಂದು ಹೊಸದಾಗಿ 22 COVID19 ಕೇಸ್ ಪತ್ತೆ: ಒಟ್ಟು ಪ್ರಕರಣಗಳ ಸಂಖ್ಯೆ 557ಕ್ಕೆ ಏರಿಕೆ