ಚಿತ್ರದುರ್ಗ: ತುಂಗಭದ್ರಾ ಹಿನ್ನೀರು ಯೋಜನೆ ಕಾಮಗಾರಿ 2022ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ಬುಧವಾರ ಯೋಜನೆ ಪ್ರಗತಿ ಪರಿಶೀಲಿಸಿ ಮಾತನಾಡಿ, ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿ, ತುಮಕೂರು ಜಿಲ್ಲೆ ಪಾವಗಡ, ಬಳ್ಳಾರಿಯ ಕೂಡ್ಲಿಗಿ ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ ಎಂದು ತಿಳಿಸಿದರು.
2340 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, 2021ರೊಳಗೆ ಮುಕ್ತಾಯವಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ವಿಳಂಬವಾಗುತ್ತಿದೆ ಎಂದು ಹೇಳಿದರು.
ತುಂಗಭದ್ರಾ ಡ್ಯಾಂ ಬೋರ್ಡ್ ಅಧ್ಯಕ್ಷರು, ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎನ್ಒಸಿಗಳು ಸಿಗದೇ ಕಾಮಗಾರಿಗಳಿಗೆ ಅಡಚಣೆ ಆಗಿದ್ದು, ಈ ತೊಡಕು ನಿವಾರಿಸುವುದಾಗಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಚಿತ್ರದುರ್ಗ ಉಪವಿಭಾಗದ ಎಇಇ ದಯಾನಂದಸ್ವಾಮಿ, ಮೊಳಕಾಲ್ಮೂರು ಸೆಕ್ಷನ್ ಅಫೀಸರ್ ಪವನ್, ಚಳ್ಳಕೆರೆ ಉಪ ವಿಭಾಗದ ಎಇಇ ಕಾವ್ಯಾ ಮತ್ತಿತರರು ಇದ್ದರು.