ಚಿತ್ರದುರ್ಗ: ಲಾಕ್ಡೌನ್ ಈ ಸಮಯದಲ್ಲಿ ಜಿಲ್ಲೆಯಲ್ಲಿ ತಂಗಿರುವ ವಿವಿಧ ರಾಜ್ಯ, ಜಿಲ್ಲೆಗಳ ಕಾರ್ಮಿಕರ ಜೀವನೋಪಾಯಕ್ಕೆ ಸಂಗ-ಸಂಸ್ಥೆಗಳು ಸಹಾಯ ಮಾಡಬೇಕಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಮುರುಘಾ ಮಠದಲ್ಲಿ ಶುಕ್ರವಾರ ಚಿತ್ರಮಂದಿರ ಕಾರ್ಮಿಕರು, ಕುಂಬಾರ ಹಾಗೂ ಬೆಸ್ತರ ಸಮುದಾಯದ 300 ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ಗಳನ್ನು ವಿತರಿಸಿ ಮಾತನಾಡಿದರು.
ಇಡೀ ಜಗತ್ತು ಇಂದು ಕರೊನಾ ಸಂಕಷ್ಟಕ್ಕೆ ಸಿಲುಕಿದೆ. ಬಡವರಿಗೆ ತೊಂದರೆ ಆಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಅನೇಕ ಮಠ, ಸಂಘ-ಸಂಸ್ಥೆಗಳು ಮಾನವೀಯತೆ ಮೆರೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.
ಲಾಕ್ಡೌನ್ನಿಂದ ತೊಂದರೆ ಆಗುತ್ತಿದ್ದರೂ ಸಹಿಸಿಕೊಳ್ಳಬೇಕಿದೆ. ನಮ್ಮಿಂದ ಇನ್ನೊಬ್ಬರಿಗೆ ರೋಗ ಹರಡದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಮಹಮ್ಮದ್ ಪಾಷ ಮಾತನಾಡಿ, ಕರೊನಾ ಸೋಂಕು ಕುರಿತು ಜಾಗೃತಿ ಅನಿವಾರ್ಯ. ಆದ್ದರಿಂದ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಕೋರಿದರು.
ಶ್ರೀ ಬಸವ ಕುಂಬಾರ ಸ್ವಾಮೀಜಿ, ಶ್ರೀ ತಿರುಕಾನಂದ ಸ್ವಾಮೀಜಿ, ವಕೀಲ ಫಾತ್ಯರಾಜನ್, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಸಿಇಒ ಎಂ.ಜಿ.ದೊರೆಸ್ವಾಮಿ, ಉಮೇಶ್, ಬಿ.ಎಂ.ಜಗದೀಶ್, ಬೆಸ್ತ ಸಮಾಜದ ಮುಖಂಡ ಶಿವಕುಮಾರ್, ಮೋಹನ್ , ಕುಂಬಾರ ಸಮಾಜದ ಯರ್ರಿಸ್ವಾಮಿ, ಮೂರ್ತಿ ಮತ್ತಿತರರು ಇದ್ದರು.