ಚಿತ್ರದುರ್ಗ: ನಗರದ ಹೊರವಲಯ ಪಿಳ್ಳೆಕೇರನಹಳ್ಳಿ ಮಲ್ಲಾಪುರ ಕೆರೆಯಲ್ಲಿ ಕಳೆದ ಎರಡು ದಿನಗಳಿಂದ ಸಾವಿರಾರು ಮೀನುಗಳು ಸಾವಿಗೀಡಾಗಿವೆ.
ಈ ಮೀನುಗಳ ಸಾವಿಗೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಆದರೆ, ಮೀನುಗಳು ಸತ್ತಿರುವುದರಿಂದ ಈ ಪ್ರದೇಶದಲ್ಲಿ ಸಹಿಸಲು ಅಸಾಧ್ಯವಾದ ದುರ್ವಾಸನೆ ಉಂಟಾಗಿದೆ ಎಂಬುದು ಗ್ರಾಮಸ್ಥರ ಅಳಲು.
ನಗರದಲ್ಲಿ ಯುಜಿಡಿ ಯೋಜನೆ ಕಾಮಗಾರಿ ಇನ್ನು ಪೂರ್ಣವಾಗದೇ ಪ್ರಸ್ತುತ ಈಗಲೂ ನಗರದ ತ್ಯಾಜ್ಯನೀರು ಮಲ್ಲಾಪುರ ಕೆರೆ ಸೇರುತ್ತಿದೆ. ಈ ತ್ಯಾಜ್ಯದಿಂದ ನೀರು ಕಲುಷಿತವಾಗುತ್ತಿದ್ದು, ಮೀನುಗಳ ಸಾವಿಗೆ ಇದೇ ಕಾರಣವಾರಿಬಹುದು. ಇಷ್ಟೊಂದು ಪ್ರಮಾಣದಲ್ಲಿ ಮೀನುಗಳು ಸತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಕೂಡಲೇ ಮೀನುಗಳ ಸಾವಿಗೆ ಕಾರಣ ಪತ್ತೆ ಮಾಡುವಂತೆ ಹಾಗೂ ಈಗ ಉಂಟಾಗಿರುವ ತ್ಯಾಜ್ಯ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮಲ್ಲಾಪುರ ಮಹಾತ್ಮ ಗಾಂಧಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷೆ ಸಿದ್ದಲಿಂಗಮ್ಮ, ಕಾರ್ಯದರ್ಶಿ ಬಸವರಾಜಪ್ಪ, ಖಜಾಂಚಿ ಪಿ.ಎಂ.ಸಿದ್ದಪ್ಪ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಅಧಿಕ ಉಷ್ಣಾಂಶದಿಂದ ಆಮ್ಲಜನಕ ಕೊರತೆ: ಸಾಮಾನ್ಯವಾಗಿ ಮೊದಲ ಮಳೆ ಆರಂಭದ ಮೊದಲ ಅಥವಾ ಎರಡನೇ ದಿನ ಏಕಾಏಕಿ ಅಧಿಕವಾಗಿ ಉಷ್ಣಾಂಶದಿಂದ ಆಮ್ಲಜನಕ ಕೊರತೆ ಉಂಟಾಗಿ ಮೀನುಗಳು ಸಾಯುತ್ತವೆ ಎಂದು ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೆಶಕ ಅಣ್ಣಪ್ಪ ಸ್ವಾಮಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಳೆಗಾಲ ಆರಂಭ ಮುನ್ನ ಶಿವರಾತ್ರಿ-ಯುಗಾದಿ ಸಂದರ್ಭದಲ್ಲಿ ಕೆರೆಗಳಲ್ಲಿರುವ ಮೀನುಗಳನ್ನು ಮಾರಾಟ ಮಾಡುವಂತೆ ಸೂಚಿಸುತ್ತೇವೆ. ಆದರೆ, ಈ ಬಾರಿ ಲಾಕ್ಡೌನ್ನಿಂದ ಮಾರಾಟ ಸಾಧ್ಯವಾಗಿಲ್ಲ. ಮಲ್ಲಾಪುರ ಕೆರೆಯಲ್ಲೂ ಮೀನು ಸಾವಿಗೆ ಆಮ್ಲಜನಕ ಕೊರತೆ ಕಾರಣವೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.