ಚಿತ್ರದುರ್ಗ: ಲಾಕ್ಡೌನ್ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಮಾಡುವುದಾಗಿ ಹೇಳಿ, ಶುಲ್ಕ ಕಟ್ಟುವಂತೆ ವಿದ್ಯಾರ್ಥಿಗಳ ಪಾಲಕರನ್ನು ಒತ್ತಾಯಿಸುತ್ತಿರುವ ಕೆಲ ಶಿಕ್ಷಣ ಮಂಡಳಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಅವರಿಗೆ ನಾಗರಿಕರು ಗುರುವಾರ ಮನವಿ ಸಲ್ಲಿಸಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ವೇಳೆ ಸದ್ಯಕ್ಕೆ ಪೋಷಕರು ಯಾವುದೇ ರೀತಿಯ ಶುಲ್ಕ ಪಾವತಿಸುವಂತಿಲ್ಲ ಮತ್ತು ಶುಲ್ಕ ಕಟ್ಟುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳೂ ಯಾರನ್ನೂ ಒತ್ತಾಯಿಸಬಾರದೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಈಗಿದ್ದರೂ ಹಲವು ಶಾಲಾ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ಪಾಲಕರ ಮೇಲೆ ಒತ್ತಡ ಹೇರುತ್ತಿವೆ.
ಆದ್ದರಿಂದ ಕೂಡಲೇ ಈ ನಿಟ್ಟಿನಲ್ಲಿ ಗಮನ ಹರಿಸಿ, ಕ್ರಮ ಜರುಗಿಸಬೇಕು ಎಂದು ನಗರದ ನಿವಾಸಿಗಳಾದ ಜಿತೇಂದ್ರ ಎನ್.ಹುಲಿಕುಂಟೆ, ಎ.ವಿ.ಮಂಜುನಾಥ್ ಒತ್ತಾಯಿಸಿದ್ದಾರೆ.