ಹೊಸದುರ್ಗ: ಮಕರ ಸಂಕ್ರಾಂತಿ ದಿನ ತಾಲೂಕಿನ ಕಂಚೀಪುರ ಗ್ರಾಮದ ಶ್ರೀ ಕಂಚೀವರದರಾಜ ಸ್ವಾಮಿ ದೇಗುಲದಲ್ಲಿ ಬುಧವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಪ್ರದಾಯದಂತೆ ಮುಂಜಾನೆ ಕಾಡಿಗೆ ತೆರಳಿದ ಭಕ್ತರು, ಪೂಜಾರರು ಹಾಗೂ ದಾಸಯ್ಯರು ಮೊಲ ಹಿಡಿದರು. ಮೊಲ ಸಿಕ್ಕ ಕೂಡಲೇ ಶಂಖನಾದ ಹಾಗೂ ಜಾಗಟೆ ಬಾರಿಸುವ ಮೂಲಕ ಗೋವಿಂದಾ.. ಗೋವಿಂದ ಎನ್ನುತ್ತಾ ಸಂಭ್ರಮಿಸಿದರು. ನಂತರ ಬಿದಿರಿನ ಬುಟ್ಟಿಯಲ್ಲಿ ಮೊಲ ದೇವಾಲಯದಲ್ಲಿಟ್ಟು ಉತ್ಸವಕ್ಕೆ ಸಿದ್ಧತೆ ನಡೆಸಿದರು.
ಸಂಜೆ ಗೋಧೂಳಿ ಮಹೂರ್ತದಲ್ಲಿ ಶ್ರೀ ಕಂಚೀವರದರಾಜ ಸ್ವಾಮಿ ಹಾಗೂ ಮೊಲವನ್ನು ಬಿದಿರಿನ ಬುಟ್ಟಿಯ ಸಮೇತ ಮೆರವಣಿಗೆ ಮೂಲಕ ಊರ ಬಾಗಿಲಿಗೆ ಕರೆತರಲಾಯಿತು.
ಮೊಲದ ಕಿವಿಗೆ ಚಿನ್ನದ ಓಲೆ ಚುಚ್ಚಿ ಪೂಜೆ ಸಲ್ಲಿಸಲಾಯಿತು. ನಂತರ ಕಂಚೀವರದರಾಜ ಸ್ವಾಮಿಗೆ ಮೂರು ಬಾರಿ ನಿವಾಳಿಸಿದ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ನಂತರ ನಡೆಮುಡಿಯೊಂದಿಗೆ ದೇವರನ್ನು ದೇಗುಲಕ್ಕೆ ಕರೆತರಲಾಯಿತು.
ಈ ವೇಳೆ ಭಕ್ತರು ದೇವರ ಮೇಲೆ ನಾಣ್ಯಗಳನ್ನು ತೂರಿ ಭಕ್ತಿ ಸಮರ್ಪಿಸಿ ಸಂಭ್ರಮಿಸಿದರು. ಉತ್ಸವ ವೀಕ್ಷಿಸಲು ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ಪ್ರಧಾನ ಅರ್ಚಕ ಡಿ.ಪರಶುರಾಮಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.