ಚಿತ್ರದುರ್ಗ: ಪ್ರತಿ ಕುಟುಂಬಕ್ಕೆ ಕೆಲಸ, ಪ್ರತಿ ಜಮೀನಿಗೂ ಬದು ಎಂಬ ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ರೈತರಲ್ಲಿ ಮನವಿ ಮಾಡಿದರು.
ತಾಲೂಕಿನ ಐಯ್ಯನಹಳ್ಳಿ ಗ್ರಾಪಂ ವ್ಯಾಪ್ತಿ ಕುರುಬರಹಟ್ಟಿ, ಜಿ.ಆರ್.ಹಳ್ಳಿ ಗ್ರಾಪಂ ವ್ಯಾಪ್ತಿಯ ಜಮೀನಿನಲ್ಲಿ ಬದು ನಿರ್ಮಾಣ ಮಾಸಾಚರಣೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಬದುಗಳಲ್ಲಿ ನೀರು ನಿಲ್ಲುವುದರಿಂದ ತೇವಾಂಶ ಹೆಚ್ಚಳವಾಗಲಿದೆ. ಹರಿಯುವ ನೀರು ನಿಲ್ಲಿಸಲು ದೊಡ್ಡ ಚೆಕ್ಡ್ಯಾಂ ನಿರ್ಮಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಬದು ನಿರ್ಮಾಣ ಸಕ್ರಿಯವಾದರೆ ಸರ್ಕಾರದ ಯೋಜನೆ ಯಶಸ್ವಿಯಾಗಲಿದೆ. ನರೇಗಾ ಯೋಜನೆಯಡಿ ಕೆಲಸ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮು, ನೆಗಡಿ, ಜ್ವರ ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಎಸ್.ಹೊನ್ನಾಂಬ ಮಾತನಾಡಿ, 19ರಿಂದ ಒಂದು ತಿಂಗಳ ಕಾಲವನ್ನು ಬದು ನಿರ್ಮಾಣ ಮಾಸಾಚರಣೆ ಎಂದು ಗುರುತಿಸಲಾಗಿದೆ. ಕೂಲಿ ಮತ್ತು ಜಾಬ್ಕಾರ್ಡ್ಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬಹುದು ಅಥವಾ ನರೇಗಾ ಸಹಾಯವಾಣಿ: 1800-4258-666, ಕಾಯಕ ಮಿತ್ರ ಆಪ್ ನೆರವು ಪಡೆಯಬಹುದು ಎಂದರು.
ಜಿಪಂ ಡಿಎಸ್ ಡಾ.ರಂಗಸ್ವಾಮಿ, ತಾಪಂ ಇಒ ಎಚ್.ಕೃಷ್ಣನಾಯಕ್, ಜಿಪಂ, ತಾಪಂ ಹಾಗೂ ಗ್ರಾಪಂ ಪ್ರತಿನಿಧಿಗಳು ಉಪಸ್ಥಿತರಿದ್ದರು.